Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ಕೋವಿಡ್ ಲಸಿಕೆ ಅಡ್ಡಪರಿಣಾಮಗಳಿಂದ ಸಾವು: ತುರ್ತು ಪರಿಹಾರ ಕ್ರಮಕ್ಕೆ ಕೇರಳ ಹೈಕೋರ್ಟ್ ಸೂಚನೆ

ತಿರುವನಂತಪುರ: ಕೋವಿಡ್ ಲಸಿಕೆ ಅಡ್ಡಪರಿಣಾಮದಿಂದ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ವಿತರಿಸಲು ತುರ್ತಾಗಿ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕೇರಳ ಹೈಕೋರ್ಟ್ ಬುಧವಾರ ಸೂಚಿಸಿದೆ

ಸಮಸ್ಯೆ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಪರಿಹಾರ ಒದಗಿಸುವುದನ್ನು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಅಭಿಪ್ರಾಯಪಟ್ಟರು.

ಇದು ನಾವು ಎದುರಿಸಿದ ರಾಷ್ಟ್ರೀಯ ವಿಪತ್ತು. ಪ್ರಸ್ತುತ ಪ್ರಕರಣ ಅತ್ಯಂತ ನೈಜವಾದುದಾಗಿದ್ದು ಅದನ್ನು ಇತ್ಯರ್ಥಪಡಿಸಬೇಕಿದೆ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ, ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬಂದಿವೆ. ಈ ವ್ಯಕ್ತಿಗಳಿಗೆ ಪರಿಹಾರ ನೀಡಲು ಸೂಕ್ತ ಮಾರ್ಗಸೂಚಿ, ಸರಿಯಾದ ಯೋಜನೆ ರೂಪಿಸುವ ಪ್ರಯತ್ನ ಅಗತ್ಯವಿದ್ದು ಅದನ್ನು ಮಾಡಬೇಕಿದೆ. ಸುಖಾಸುಮ್ಮನೆ ಆದೇಶ ನೀಡುವ ಬದಲು ತರ್ಕಬದ್ಧ ತೀರ್ಪು ನೀಡುವ ಸಲುವಾಗಿ ಅವರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆಯಲ್ಲಿ ನೀಡಲಿ. ಇದು ನಗೆಪಾಟಲಿನ ವಿಚಾರವಲ್ಲ, ನಾನಿದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇನೆ” ಎಂದು ಅವರು ಮೌಖಿಕವಾಗಿ ಟೀಕಿಸಿದರು.

ಕುಟುಂಬದ ಆಧಾರವಾಗಿದ್ದವರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅವಲಂಬಿಸಿದ್ದ ಕುಟುಂಬ ಸದಸ್ಯರು ತೀವ್ರ ತೊಂದರೆ ಎದುರಿಸುತ್ತಿದ್ದು ಪರಿಹಾರ ಪ್ರಕ್ರಿಯೆ‌ ತ್ವರಿತಗೊಳಿಸಬೇಕು ಎಂಬ ಅರ್ಜಿದಾರರ ವಾದದ ಗಂಭೀರತೆಯನ್ನು ನ್ಯಾಯಾಲಯ ಮನ್ನಿಸಿತು.

“ಅರ್ಜಿದಾರರ ಪರ ವಕೀಲರು ಎತ್ತಿರುವ ಅನುಮಾನಗಳು ಸಾಧಾರವಾಗಿವೆ ಎಂದು ನನಗನಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಡೆಯಿಂದ ತುರ್ತು ಕ್ರಮದ ಅಗತ್ಯವಿದೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಆಗಸ್ಟ್‌ 30ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!