ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು ದಳ್ಳುರಿಯಲ್ಲಿ ಬೆಂದು ಹೋಗಿತ್ತು. ಆದರೆ, ಈ ಬಾರಿ ಮುಸ್ಲಿಮರೇ ಗಣೇಶ ಮೂರ್ತಿಯ ಮೆರವಣಿಗೆಯ ಸಾರಥ್ಯ ವಹಿಸಿಕೊಂಡು ಸೌಹಾರ್ದದ ದೀಪ ಬೆಳಗಿಸಿದ್ದಾರೆ.
ಪಟ್ಟಣದ ಮೈಸೂರು ರಸ್ತೆಯ ಎ.ಡಿ.ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಸ್ಥಳಕ್ಕೆ ಗುರುವಾರ ರಾತ್ರಿ ಮುಸ್ಲಿಮರು ಬಂದು ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಶುಕ್ರವಾರ ನಡೆದ ವಿಸರ್ಜನಾ ಮೆರವಣಿಗೆಗೆ ಗಣೇಶೋತ್ಸವ ಸಮಿತಿಯೊಂದಿಗೆ ಕೈಜೋಡಿಸಿದರು.
ವಿಶೇಷ ಪೂಜೆ ಬಳಿಕ ಅಲಂಕೃತ ಟ್ರ್ಯಾಕ್ಟರ್ಗೆ ಗಣೇಶ ಮೂರ್ತಿಯನ್ನು ಕೂರಿಸಿದ ಮುಸ್ಲಿಂ ಯುವಕರು ತಾವೇ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಯಾ ಅಲ್ಲಾಹ್ ಮಸೀದಿಯ ಮುಂಭಾಗಕ್ಕೆ ಕರೆತಂದರು. ಮೆರವಣಿಗೆ ಮಸೀದಿ ಮುಂಭಾಗ ತಲುಪುತ್ತಿದ್ದಂತೆ ಮಸೀದಿ ಕಮಿಟಿ ಹಾಗೂ ಮುಸ್ಲಿಂ ಮುಖಂಡರು ಗಣೇಶ ಮೂರ್ತಿಗೆ ಬೃಹತ್ ಹಾರ ಹಾಕಿ ಗೌರವ ಸಲ್ಲಿಸಿದರು.
ಮೆರವಣಿಗೆಯಲ್ಲಿದ್ದ ಭಕ್ತರಿಗೆ ಮುಸ್ಲಿಂ ಯುವಕರು ಸಿಹಿ ತಿಂಡಿ, ಶರಬತ್ತು ಹಾಗೂ ಕುಡಿಯುವ ನೀರನ್ನು ವಿತರಿಸಿದರು. ಗಣಪತಿ ಬಪ್ಪಾ ಮೋರಯಾ ಎಂದು ಜೈಕಾರ ಹಾಕಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಹಿಂದೂ ಬಾಂಧವರನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು




