ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯನವರು, ಅಽಕಾರಿಗಳೊಡನೆ ಇತ್ತೀಚೆಗೆ ಸಭೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರು ಫಿಲಂ ಸಿಟಿ ನಿರ್ಮಿಸಲು ಹೇಳಿ ಮಾಡಿಸಿದಂತಿದೆ. ಕಲೆ, ಸಂಗೀತ, ನೃತ್ಯ, ಮುಂತಾದ ಲಲತ ಕಲೆಗಳ ನೆಲೆವೀಡಾದ ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ದಸರಾ ಮಹೋತ್ಸವ ವಿಶ್ವ ವಿಖ್ಯಾತವಾಗಿದೆ. ಚಿತ್ರರಂಗದ ಹಲವಾರು ಪ್ರಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ಮೈಸೂರಿನ ಟಿಸಿಲೊಡೆದಿದ್ದಾರೆ.
ಹಲವು ದಶಕಗಳ ಹಿಂದೆಯೇ ದಿವಂಗತ ಕೆ.ಎನ್. ಬಸವರಾಜಯ್ಯನವರು ಇಲ್ಲೇ ಪ್ರೀಮಿಯರ್ ಸ್ಟುಡಿಯೋವನ್ನು ನಿರ್ಮಿಸಿ (ಈಗ ಅದು ಇಲ್ಲ ಬಿಡಿ) ವಿವಿಧ ಭಾಷೆಗಳ ಚಲನ ಚಿತ್ರಗಳ ತಯಾರಿಕೆಗೆ ಅಥವಾ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದರು. ಈ ಎಲ್ಲ ಕಾರಣಗಳಿಂದ ಫಿಲಂ ಸಿಟಿ ಮೈಸೂರಿನ ನಿರ್ಮಾಣವಾಗುವುದರಿಂದ ಸ್ಥಳೀಯ ಕಲಾವಿದರಿಗೂ ಕೆಲಸ ದೊರಕಿದಂತಾಗುತ್ತದೆ. ಈ ಯೋಜನೆ ಸಾಧ್ಯವಾದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ .
-ಕೆ.ವಿ.ವಾಸು, ಮೈಸೂರು



