Mysore
25
overcast clouds

Social Media

ಗುರುವಾರ, 10 ಸೆಪ್ಟೆಂಬರ್ 2026
Light
Dark

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್

ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ

ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ ಬೀದಿ ಸಂಪರ್ಕದ ಪ್ರಮುಖ ರಸ್ತೆಯಾದ ರೈಲ್ವೆ ಅಂಡರ್‌ಪಾಸ್ ಪಾದಚಾರಿ ಮಾರ್ಗ(ರ‍್ಯಾಂಪ್)ದ ಕಾಂಕ್ರೀಟ್ ಚಪ್ಪಡಿಗಳು ಕುಸಿದು ಇಲ್ಲಿ ಸಂಚರಿಸುವ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಕುಸಿದ ಕಾಂಕ್ರೀಟ್ ಚಪ್ಪಡಿಗಳು ಕಳಪೆ ಕಾಮಗಾರಿಯಿಂದಾಗಿ ಕಾಂಕ್ರೀಟ್ ಚಪ್ಪಡಿಗಳು ರಸ್ತೆಯುದ್ದಕ್ಕೂ ಇರುವ ರ‍್ಯಾಂಪ್ ನಲ್ಲಿ ಅಲ್ಲಲ್ಲಿ ಕುಸಿದುಬಿದ್ದು, ಸರಳುಗಳು ಉದ್ದಕ್ಕೆ ಚಾಚಿಕೊಂಡಿವೆ. ಬಾಯ್ದೆರೆದು ನಿಂತಿರುವ ಈ ಗುಂಡಿಗಳ ಪಾದಚಾರಿ ಮಾರ್ಗದಲ್ಲಿ ಹಗಲು ವೇಳೆಯೇ ಎಷ್ಟೇ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೂ ಹಲವರು ಬಿದ್ದು ಗಾಯಗೊಂಡಿದ್ದಾರೆ.

ಭಯದಿಂದಲೇ ಸಂಚರಿಸುವ ಜನರು ಕುಸಿದುಬಿದ್ದಿರುವ ಕಾಂಕ್ರೀಟ್ ಚಪ್ಪಡಿ ಮೇಲೆ ತಾತ್ಕಾಲಿಕವಾಗಿ ಅಳವಡಿಸಿರುವ ಕಲ್ಲಿನ ಚಪ್ಪಡಿಗಳು ಜಾರಿ ಹಳ್ಳದೊಳಕ್ಕೆ ಬೀಳುತ್ತಿವೆ. ಹೆಚ್ಚು ಜನಸಂಚಾರವಿರುವ ಈ ರ‍್ಯಾಂಪ್ ಮಾರ್ಗದಲ್ಲಿ ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ಮಹಿಳೆಯರು, ವೃದ್ಧರು ಎಲ್ಲಿ ಕಾಲಿಟ್ಟರೆ ಏನಾಗುವುದೋ ಎಂಬ ಭಯದಿಂದಲೇ ಸಂಚರಿಸುವಂತಾಗಿದೆ.

ಕತ್ತಲಾದ ಮೇಲೆ ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಪಾದಚಾರಿಗಳು ಈ ರ‍್ಯಾಂಪ್ ಸಹವಾಸವೇ ಬೇಡವೆಂದು ರಸ್ತೆಗಿಳಿಯುತ್ತಾರೆ. ಅಪ್ ಅಂಡ್ ಡೌನ್ ರಸ್ತೆಯ ಈ ಅಂಡರ್‌ಪಾಸ್ ಮಧ್ಯದಲ್ಲೇ ಕೆಲ ದಿನಗಳ ಹಿಂದಷ್ಟೇ ಹಾಕಲಾಗಿದ್ದ ಡಾಂಬರು ರಸ್ತೆ ಕಿತ್ತು ಹೋಗಿ, ಅಂಡರ್‌ಪಾಸ್‌ನಲ್ಲೇ ಹಳ್ಳಕೊಳ್ಳಗಳಾಗಿವೆ.

ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಹಲವಾರು ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದೇ ರಸ್ತೆಯಲ್ಲಿ ಸಂಚರಿಸುವ ಅಧಿಕಾರಿಗಳು ಇದೆಲ್ಲವನ್ನು ಕಂಡೂ ಕಾಣದಂತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಇನ್ನು ಇದರ ಪಕ್ಕದಲ್ಲೇ ಇರುವ ಪಾದಚಾರಿಗಳ ಅಂಡರ್‌ಪಾಸ್‌ನಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಅಲ್ಲಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಗುಟ್ಕಾ, ಪಾನ್‌ಪರಾಗ್ ಅಗಿದು ಉಗುಳುವ ಅನಾಗರಿಕ ವರ್ತನೆಯಿಂದ ಈ ದುರ್ವಾಸನೆಯಲ್ಲೇ ಜನರು ಸಂಚರಿಸಬೇಕಿದೆ. ಬಹುಮುಖ್ಯವಾಗಿ ರಾತ್ರಿ ವೇಳೆ ಇಲ್ಲಿ ಬೆಳಕಿನ ವ್ಯವಸ್ಥೆ ಸರಿಪಡಿಸಬೇಕಿದೆ.

” ಈ ತರ ಕಾಂಕ್ರೀಟ್ ಸ್ಲ್ಯಾಬ್‌ಗಳು ಕುಸಿದು ಬೀಳುವುದು, ತಾತ್ಕಾಲಿಕವಾಗಿ ಕಲ್ಲುಚಪ್ಪಡಿ ಹಾಕಿ ಹೋಗುವುದು ಇಲ್ಲಿ ಮಾಮೂಲಾಗಿದೆ. ಬಹಳಷ್ಟು ಸಾರಿ ಇಂತಹ ತೇಪೆ ಸಾರಿಸೋ ಕೆಲಸ ಮಾಡುತ್ತಲೇ ಇದ್ದಾರೆ. ಗುಣಮಟ್ಟದ ಕೆಲಸ ಮಾಡುತ್ತಲೇ ಇಲ್ಲ. ಶಾಸಕರವಿಕುಮಾರ್ ಅವರು ಇತ್ತ ಗಮನ ಹರಿಸಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.”

ಕೆ.ಪುಟ್ಟೇಗೌಡ, ಪ್ರಿಂಟಿಂಗ್ ಪ್ರೆಸ್ ಮಾಲೀಕರು

” ರೈಲ್ವೆ ಅಂಡರ್‌ಪಾಸ್‌ನಲ್ಲಿ ಗುಂಡಿಗಳ ಮೇಲೆ ಪೇರಿಸಿರುವ ಚಪ್ಪಡಿ ಮೇಲೆ ಕಾಲಿಟ್ಟು ಸಾರ್ವಜನಿಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈಗಲಾದರೂ ಪಾದಚಾರಿ ಮಾರ್ಗವನ್ನು ಸರಿಪಡಿಸಲಿ.”

ಸ್ವಾಮಿ, ವ್ಯಾಪಾರಿ, ಕೊಡಿಯಾಲ.

ದೂರವಾಣಿ ಸಂಪರ್ಕಕ್ಕೆ ಸಿಗದ ಅಧಿಕಾರಿಗಳು:  ಮಂಡ್ಯದ ರೈಲ್ವೆ ಅಂಡರ್‌ಪಾಸ್ ಪಾದಚಾರಿ ಮಾರ್ಗ(ರ‍್ಯಾಂಪ್)ದ ಅವ್ಯವಸ್ಥೆ ಕುರಿತು ವಿಚಾರಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ‘ಆಂದೋಲನ’ ವರದಿಗಾರರು ದೂರವಾಣಿ ಕರೆ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ

 

 

Tags:
error: Content is protected !!