ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ. ಸಾರಿಗೆ ಇಲಾಖೆಗೆ ಎಂಟರಿಂದ ಒಂಬತ್ತು ಕೋಟಿ ರೂ. ನಷ್ಟವಾಗುತ್ತಿರುವುದರಿಂದ ಸದ್ಯದಲ್ಲಿಯೇ ಸಾರಿಗೆ ದರ ಪರಿಷ್ಕರಣೆಯಾಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿರುವುದು ಜನ ಸಾಮಾನ್ಯರು ಅದರಲ್ಲೂ ಪುರುಷರು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾದ ಸ್ಥಿತಿ ಇದೆ. ಹೆಂಗಸರಿಗೆ ಉಚಿತ ಎನ್ನುವ ಸರ್ಕಾರ ಇಬ್ಬರ ದರವನ್ನೂ ಒಬ್ಬರಿಂದಲೇ(ಪಾಪ ಪುರುಷರಿಂದ) ಕಸಿಯುವ ಯತ್ನವಲ್ಲವೇ ಇದು. ನೀವು ಬಡ ಮಹಿಳೆಯರಿಗೆ ಉಚಿತ ಸಾರಿಗೆ ಒದಗಿಸಲೇ ಬೇಕು ಎನ್ನುವಂತವರಾದರೆ ಸಂಬಂಧಿಸಿದ ಜಿಯೊಳಗೆ ಮಾತ್ರ ಅವಕಾಶ ಮಾಡಿ ಕೊಡಿ. ಅದು ಬಿಟ್ಟು ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲಿ ಎಂದು ಹೇಳಿ ‘ಅಭಾಗ್ಯವಂತರಿಂದ’ ಹೆಚ್ಚಿನ ಟಿಕೆಟ್ ದರ ವಸೂಲಿಗೆ ಮುಂದಾಗುತ್ತಿರುವುದು ನ್ಯಾಯವೇ ಎಂದು ಕೇಳಿದರೆ ಅದು ಸಾರಿಗೆ ಸಚಿವರ ಕಿವಿಮುಟ್ಟುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಗೊಣಗುತ್ತಲೇ ಹೇಳಬೇಕಿದೆ. ಡೀಸೆಲ್ ದರ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಅನಿವಾರ್ಯವಾಗಿ ಟಿಕೆಟ್ ದರ ಹೆಚ್ಚಿಸಬೇಕಾಗಿದೆ ಎಂಬ ಗೊತ್ತುಪಡಿಸಿದ ಹೇಳಿಕೆ ಕೇಳಿಕೊಂಡು ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇದ್ದೇ ಇದೆ. ಸರ್ಕಾರಿ ಉದ್ಯೋಗಿಗಳಿಗೆ ವರುಷಕ್ಕೆ ಎರಡು ಬಾರಿ ತುಟ್ಟಿಭತ್ಯ ಪರಿಷ್ಕರಣೆಯಾಗುತ್ತದೆ. ಆದರೆ ಖಾಸಗಿ ವಲಯ ಮತ್ತು ದಿನಗೂಲಿ ಆಧಾರದಲ್ಲಿ ದುಡಿದು ತಿನ್ನುವ ಮಂದಿ ತಾನೆ ಕಷ್ಟಗಳ ಸರಮಾಲೆಗೆ ಕೊರಳು ಕೊಡಬೇಕಾಗಿರುವುದು.
-ವಿಜಯ್ ಹೆಮ್ಮಿಗೆ, ಮೈಸೂರು




