Mysore
21
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಟಿಎಪಿಸಿಎಂಎಸ್ ಅಧಿಕಾರ ಹಿಡಿಯಲು ತಂತ್ರ-ಪ್ರತಿತಂತ್ರ

ಮಂಜು ಕೋಟೆ

ಎಚ್.ಡಿ.ಕೋಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಗುರುವಾರ (ಆ.೨೦) ನಡೆಯಲಿದ್ದು, ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜಾ.ದಳ ಮೈತ್ರಿ ಪಕ್ಷಗಳು ರಣತಂತ್ರ ರೂಪಿಸುತ್ತಿವೆ.

ಕಳೆದ ತಿಂಗಳು ನಡೆದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ಕುತೂಹಲಮೂಡಿಸಿತ್ತು. ಮೂರೂ ಪಕ್ಷಗಳು ೧೨ ಸ್ಥಾನಗಳಲ್ಲಿ ಗೆಲ್ಲಲು ಅನೇಕ ಕಾರ್ಯತಂತ್ರ ರೂಪಿಸಿದ್ದವು. ಟಿಎಪಿಸಿಎಂಎಸ್ ವತಿಯಿಂದ ಸರ್ಕಾರದ ಅನುದಾನದ ಮೂಲಕ ಹಾಗೂ ಸ್ಥಳೀಯ ಅನುದಾನದ ಮೂಲಕ ಮತ ನೀಡಿದ ಮತದಾರರಿಗೆ, ರೈತರಿಗೆ, ಸಾರ್ವಜನಿಕರಿಗೆ ಅಭಿವೃದ್ಧಿ ಕೆಲಸ ಮಾಡಿ ಕೊಡದಿದ್ದರೂ ಮೂರೂ ಪಕ್ಷಗಳವರು ತಮ್ಮ ಪ್ರತಿಷ್ಠೆಗಳಿಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಮೈತ್ರಿಯ ೮ ನಿರ್ದೇಶಕರು ಚುನಾಯಿತರಾಗಿದ್ದರೆ, ಕಾಂಗ್ರೆಸ್ ಬೆಂಬಲಿತ ನಾಲ್ವರು ನಿರ್ದೇಶಕರು ಆಯ್ಕೆಯಾಗಿದ್ದಾರೆ. ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿದ್ದು, ಜಾ.ದಳ ಮತ್ತು ಬಿಜೆಪಿಯವರು ಅಧಿಕಾರ ಹಿಡಿಯಲೇ ಬೇಕೆಂದು ಹಾಗೂ ಕಾಂಗ್ರೆಸ್ ಪಕ್ಷದವರು ಫಲಿತಾಂಶದಲ್ಲಿ ಹಿನ್ನಡೆಯಾಗಿ ದ್ದರೂ ಅಧಿಕಾರ ಹಿಡಿದು ತಮ್ಮ ಪ್ರಾಬಲ್ಯವನ್ನು ತೋರಿಸಬೇಕೆಂಬ ಹಠದಿಂದ ತಮ್ಮದೇ ಕಾರ್ಯತಂತ್ರ ನಡೆಸುತ್ತಿದ್ದಾರೆ.

ಜಾ.ದಳ ಮತ್ತು ಬಿಜೆಪಿ ಮೈತ್ರಿಯ ಸಹಕಾರಿ ಧುರೀಣರಾಗಿರುವ, ಎರಡು ಬಾರಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದ ಹಾಗೂ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಮೊತ್ತ ಬಸವರಾಜಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ನಂಜನಗೂಡು ಉಸ್ತುವಾರಿಯಾಗಿರುವ ಹಿರೇಹಳ್ಳಿ ಸೋಮೇಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಮತ್ತು ಶಿವನಂಜಮ್ಮ, ಮಾದೇವಪ್ಪ, ರಾಜನಾಯಕ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ಅಧಿಕಾರ ಹಿಡಿಯಲೇಬೇಕೆಂದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅಧಿಕಾರ ಹಿಡಿಯಲು ಬಹುಮತ ಹೊಂದಿರುವ ಮೈತ್ರಿ ಪಕ್ಷಗಳ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೊತ್ತ ಬಸವರಾಜಪ್ಪ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸೇರಿದಂತೆ ಎಂಟು ಜನ ನಿರ್ದೇಶಕರು ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದವರು ಏನೇ ತಂತ್ರಗಾರಿಕೆ ಮಾಡಿದರೂ ಅದಕ್ಕೆ ಪ್ರತಿ ತಂತ್ರ ರೂಪಿಸುತ್ತಿದ್ದಾರೆ.

ಎ ತರಗತಿಯ ನಾಲ್ಕು ಜನ ಕಾಂಗ್ರೆಸ್ ಪಕ್ಷದ ಬೆಂಬಲಿತರು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಹಿರೇಹಳ್ಳಿ ಸೋಮೇಶ್, ಶಾಸಕರಾದ ಅನಿಲ್ ಚಿಕ್ಕಮಾದು ಹಾಗೂ ಅನೇಕ ಮುಖಂಡರು ಚರ್ಚೆ ನಡೆಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷದ ಬೆಂಬಲಿತ ನಾಲ್ಕು ನಿರ್ದೇಶಕರು, ಶಾಸಕರು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿ ಸೇರಿ ಒಟ್ಟು ೭ ಜನರ ಬೆಂಬಲದೊಡನೆ, ಇನ್ನೊಂದು ಮತವನ್ನು ಪಡೆದು ಅಧಿಕಾರ ಹಿಡಿಯಬೇಕೆಂದು ಪಣತೊಟ್ಟಿದ್ದಾರೆ.

ಒಟ್ಟಿನಲ್ಲಿ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಕಾರ್ಯಕರ್ತರು, ಮುಖಂಡರು, ಸಾರ್ವ ಜನಿಕರಿಗೆ ಟಿಎಪಿಸಿ ಎಂಎಸ್‌ನ ನಿರ್ದೇಶಕರ ಸ್ಥಾನಗಳ ಚುನಾವಣೆಯ ಕುತೂಹಲ ಮೂಡಿಸಿತ್ತು. ಈಗ ವರಿಷ್ಠರ ಆಯ್ಕೆ ಇನ್ನಷ್ಟು ಕುತೂಹಲ ಮೂಡಿಸಿದೆ.

Tags:
error: Content is protected !!