ಮೈಸೂರು : ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ. ಗುಂಪು ಗುಂಪಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಸುಸೂತ್ರವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಲು ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರೇ ಹೆಚ್ಚಿರುವ ಎನ್.ಆರ್.ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆಯು ಚುನಾವಣಾ ಆಯೋಗ ನೀಡಿರುವ ಮಾನದಂಡದಂತೆ ನಡೆಯುತ್ತಿಲ್ಲ. ಮಸೀದಿ, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಸೇರಿಸಿ, ಅರ್ಜಿಗಳನ್ನು ಭರ್ತಿ ಮಾಡಿಸಲಾಗುತ್ತಿದೆ. ನಿಯಮಾನುಸಾರ ಬಿಎಲ್ಒಗಳು ಮನೆ ಮನೆಗೆ ತೆರಳಿ ಮತದಾರರ ವೈಯಕ್ತಿಕ ಮಾಹಿತಿ ಪಡೆದು ಅರ್ಜಿ ಭರ್ತಿ ಮಾಡಿಸಬೇಕು. ಹಾಗೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಏಜೆಂಟರನ್ನು ಸೇರಿಸುತ್ತಿಲ್ಲ
ಬಿಜೆಪಿಯಿಂದ ಬೂತ್ ಮಟ್ಟದಲ್ಲಿ ನೇಮಕ ಮಾಡಲಾಗಿರುವ ಏಜೆಂಟರು ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಅಲ್ಲಿನ ಜನರು ನೋಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ಸ್ಥಳಕ್ಕೆ ನಮ್ಮವರು ಹೋದರೆ ಬೆದರಿಕೆ ಹಾಕಲಾಗುತ್ತಿದೆ. ಆದರೆ, ಕಾಂಗ್ರೆಸ್ ಏಜೆಂಟರು ಪ್ರತಿ ಬಿಎಲ್ಒಗಳ ಬಳಿ ತಲಾ ಮೂರು ಮಂದಿ ಇದ್ದಾರೆ. ಸಿಆರ್ಪಿಎ- ಪೊಲೀಸ್ ಭದ್ರತೆ ಒಡಗಿಸಿದರೆ ಮಾತ್ರ ನೈಜ ಮತದಾರರು ಯಾರೆಂದು ತಿಳಿಯಲು ಸಾಧ್ಯವಿದೆ ಎಂದರು.
ಮಾಜಿ ಮಹಾಪೌರ ಎಸ್.ಸಂದೇಶ್ ಸ್ವಾಮಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್, ಕೆ.ಸಿ.ರುದ್ರಮೂರ್ತಿ, ನಗರ ಉಪಾಧ್ಯಕ್ಷ ಮೈ.ಪು.ರಾಜೇಶ್, ನಗರ ವಕ್ತಾರ ಎಂ.ವಿ.ಮೋಹನ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ರವಿ, ಸಂತೋಷ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




