ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ ಬಂದಾಗ ಮಾತ್ರ ದೇಶದ ನಿಜವಾದ ಪ್ರಗತಿ ಸಾಧ್ಯ ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ. ರಾಜ್ಯ ಸರ್ಕಾರವು ಪರಿಶಿಷ್ಟ ಜತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್, ರೈಲ್ವೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಿದೆ ಅಷ್ಟೇ.
ಆದರೆ, ಕಳೆದ ೨-೩ ವರ್ಷಗಳಿಂದ ಈ ತರಬೇತಿಗೆ ಅರ್ಜಿಯನ್ನೇ ಆಹ್ವಾನಿಸಿಲ್ಲ. ಈಗಾಗಲೇ, ೨೦೨೫-೨೦೨೬ನೇ ಸಾಲು ಮುಗಿದು ಹೋಗಿದೆ. ಇನ್ನೂ ಯುಪಿಎಸ್ಸಿ ಪರೀಕ್ಷೆಗೂ ನೀಡುವಂತಹ ತರಬೇತಿಗೆ ಅರ್ಜಿ ಕರೆದಿಲ್ಲ. ಇದಕ್ಕೆ ನೈಜ ಕಾರಣವಾದರೂ ಏನು..? ಗಮನಿಸಬೇಕಾದ ಅಂಶವೆಂದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಹುದ್ದೆಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೂ ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿಗಳೇ ಇದ್ದಾರೆ.
ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲೂ ಹಾಗೂ ಕಾನೂನು ಕಟ್ಟಪ್ಪಣೆಗಳನ್ನು ಹೊರಡಿಸುವ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳೂ ಬಹುತೇಕ ಪರಿಶಿಷ್ಟ ಜತಿಯವರೇ ಇರುತ್ತಾರೆ. ಹೀಗಿದ್ದರು ಈ ಪರಿ ನಿರ್ಲಕ್ಷ್ಯ ಆದರೂ ಏಕೆ..? ಸರ್ಕಾರದಿಂದ ಸಿಗುವಂಥ ಯೋಜನೆ ಸಂವಿಧಾನಾತ್ಮಕ ಹಕ್ಕು. ದಯೆ ಅಲ್ಲ. ಸಾಮಾಜಿಕ ನ್ಯಾಯ ಅಂದರೆ ಯಾವುದೇ ಯೋಜನೆಗಳು ನಿರಂತರವಾಗಿ ಸಿಗಬೇಕೇ ವಿನ ನಿಲ್ಲಬಾರದು. ಮುಖ್ಯಮಂತ್ರಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಲಿ.
– ಅನಿಲ್ ಕುಮಾರ್, ನಂಜನಗೂಡು


