‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸರವರ ಈ ಪರಿಕಲ್ಪನೆ ನಿಜಕ್ಕೂ ವಿನೂತನ. ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಮನೆಗಳದರೂ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆಸಕ್ತಿ ವಹಿಸಿರುವುದು ಕನ್ನಡ ಸಾಹಿತಿಗಳು ಮತ್ತು ಪ್ರಕಾಶಕರಿಗೆ ಆರ್ಥಿಕವಾಗಿ ಉತ್ತೇಜನಕಾರಿ. ಈ ಕಾರ್ಯಕ್ರಮದಡಿ ಈಗಾಗಲೇ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಕಳೆದ ವರ್ಷ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಪ್ರಾರಂಭಗೊಂಡಿತು. ನಾವು ಮನೆ ಕಟ್ಟುವಾಗ ದೇವರಿಗೊಂದು ಕೋಣೆ ನಿರ್ಮಾಣ ಮಾಡಿದಂತೆ, ಗ್ರಂಥಾಲಯಕ್ಕೊಂದು ಸೂಕ್ತ ವ್ಯವಸ್ಥೆ ಮಾಡಿದರೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದಂತಾಗುತ್ತದೆ. ಗ್ರಂಥಾಲಯದ ಪರಿಕಲ್ಪನೆ ಮನೆಯಿಂದಲೇ ಪ್ರಾರಂಭವಾಗಬೇಕು. ಪ್ರಾಧಿಕಾರದ ಈ ಯೋಜನೆ ಯಶಸ್ವಿಯಾಗಲಿ.
– ಬೂಕನಕೆರೆ ವಿಜೇಂದ್ರ, ಮೈಸೂರು





