ದಿಲೀಪ್ ಎನ್ಕೆ
ಊರ ಮಾರಿಹಬ್ಬಗಳಲ್ಲಿ ಕೇರಿಯಾಗಿನ ಕೇರಿಗಳಲ್ಲಿ ಮೊಳಗುವ ಚಿತ್ರಗೀತೆಗಳಂತೆ ಈಗ ದೇಶದ ತುಂಬೆಲ್ಲಾ ಬರೀ ಅವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಪ್ರಚಂಡ ಜಿರಳೆ ಪಡೆ
ಗಡತ್ತಾದ ನಿದ್ದೆ. ಹೊತ್ತು ಮೀರಿದ ಹೊತ್ತು. ಏನೋ ಗುರು ಗುರು ಅದೆಂತಹದೋ ತಿಮಿರ. ದಿನನಿತ್ಯದ ಮರ್ಮ ಸೀಳುವ ನಾವುಗಳು ಆಶೀರ್ವಾದ ಎಂದೇ ಹೇಳುವ ಮನೆಯಾಗಿನ ಮನೆಯ ಛೇಡಿಸುವ ಮಾತುಗಳು ಇಂದೇಕೋ ಕೇಳುತ್ತಲೇ ಇಲ್ಲವಲ್ಲ? ಹ್ಞಾಂ.. ಅದಕ್ಕೆ ಬದಲಾಗಿ ಲೆಕ್ಕವಿಲ್ಲದ ಆಕ್ರೋಶವು ನಿದ್ದೆಯ ಕೊರಳಪಟ್ಟಿ ಹಿಡಿದು ಹಿಗ್ಗಾಮುಗ್ಗ ತದುಕುತ್ತಿದೆ. ಬಹುತೇಕರು ನಿದ್ದೆಯಿಂದ ಎಚ್ಚರಗೊಳ್ಳೋದು ಈ ಆರ್ಕಿಮಿಡಿಸ್ ಯುರೇಕಾ ಎಂದು ಬೊಬ್ಬೆ ಹಾಕುತ್ತಾ ಸ್ನಾನದ ಮನೆಯಿಂದ ಏಕಾಏಕಿ ಅದೂ ನಗ್ನವಾಗಿ ಹೊರಬಂದಂತೇ ಎಂದು ಭಾವಿಸಿರುವುದುಂಟು. ಈ ತಲೆಮಾರಿಗಂತೂ ಅದರಲ್ಲೂ ಈ ಜೆನ್ ಝೀ ಗಳಿಗಂತೂ ಈ ತರಹದ ಸೀನುಗಳೆಲ್ಲಾ ಇಲ್ಲವೇ ಇಲ್ಲ ಬಿಡಿ.ಆಯ್ತು ಹೊದ್ದುಕೊಂಡಿದ್ದ ರಗ್ಗನ್ನು ಚಟಕ್ಕನೆ ಜಾಡಿಸಿ ಪಟಕ್ಕನೆ ಎದ್ದು ನೋಡಿದರೆ…! ಅಬ್ಬಾ… ಹೀಗೂ ಉಂಟೇ ? ಟಿವಿ೯ ನ ಕಾರ್ಯಕ್ರಮವೇ ಅಯ್ಯೋ ಎಂದು ಮೂಗು ಮುರಿಯಬೇಡಿ. ಇದು ನಿಜಕ್ಕೂ ದೇಸವಾಗಿನ ದೇಸವೇ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ ಜಿ ಜಿ ಜಿರಳೆಯ ಇಚಾರ.
ಯಾರೋ ಮಹಾಶಯರೊಬ್ಬರು ಸಮಾಜದ ಒಂದು ವರ್ಗವನ್ನು ಬೊಟ್ಟು ಮಾಡಿ ಹೇಳಿದ : ‘ಜಿರಳೆಗಳು’, ‘ಸಮಾಜದ ಪರಾವಲಂಬಿಗಳು’ ಎಂಬ ಸಾಮರ್ಥ್ಯಕ್ಕೆ ಸಾಣಿ ಹಿಡಿಯುವ ಮಾತುಗಳು, ಆ ಒಂದು ವರ್ಗವನ್ನು ಇಡೀ ಸಮಾಜದ ಮುಖ್ಯವಾದ ಮೂಲೆಗಲ್ಲೇ ಆಗುವಂತೆ, ಇಡೀ ಸಮಾಜವೇ ನಮ್ಮನ್ನು ಅವಲಂಬಿಸುವಂತಾಗಬೇಕು ಎಂಬ ಕೆಚ್ಚೆದೆಯನ್ನು ಪ್ರಚೋದಿಸುವುದಿದೆಯಲ್ಲಾ ಅದು ನಿಜಕ್ಕೂ ಮಾತಿನ ಮೌಲ್ಯವನ್ನು ಪ್ರಕಟಪಡಿಸುತ್ತದೆ.
ಅದರಲ್ಲಿ ಜೆನ್ ಎಕ್ಸ್, ಜೆನ್ ವೈ, ಜೆನ್ ಝೀ, ಆಲ್ಛಾ ಬೀಟ ಗಾಮ, ಹಿರಿಯ – ಕಿರಿಯರೆನ್ನದೆ ಎಲ್ಲರೂ ಸಮ್ಮಿಳಿತಗೊಂಡಿರುವಂತಹದ್ದು ನಿಜಕ್ಕೂ ಗರುಡಗಂಭದಂತೆ ನಮ್ಮ ಕಣ್ಣೆದುರಿಗಿದೆ. ಎದೆಗೆ ಬಿದ್ದ ಬೀಜ ಭೂಮಿಗೆ ಬಿದ್ದ ಬೀಜಕ್ಕಿಂತಲೂ ಬೇಗನೇ ಫಲ ಕೊಡುತ್ತದೆ.
ಸುತ್ತ ಎಲ್ಲೆಲ್ಲೂ ಮುಕ್ಕು- ಮೂಳುಗಳ ಆವಾಸಸ್ಥಾನವಾದ ಹಳ್ಳಿಗಳಿಂದ ಹಿಡಿದು ಠಾಕು ಠೀಕಿನ ದಿಲ್ಲಿಯ ಜಂತರ್ ಮಂಥರ್ನ ವರೆವಿಗೂ ಸೋಮಾರಿಗಳು,ನಿರುದ್ಯೋಗಿಗಳ ಧ್ವನಿಯೇ ಆದ ಪ್ರಚಂಡ ಜಿರಳೆ ಪಡೆಯದೇ ಸದ್ದು. ನೀಟ್, ಸಿಯುಇಟಿ ಪ್ರಶ್ನೆ ಪತ್ರಿಕೆಗಳ ಸೋರಿಕೆ,ಸಿಬಿಎಸ್ಇ ಮೌಲ್ಯಮಾಪನದ ತೊಡಕುಗಳು, ಉದ್ಯೋಗಾವಕಾಶಗಳ ಕೊರತೆ,ದೇಶದ ಬೆನ್ನೆಲುಬೇ ಆದ ಯುವಜನತೆಯ ಕಡೆಗಣನೆ, ಸರ್ಕಾರಿ ನೇಮಕಾತಿಗಳಿಗೆ ಹಿಂದೇಟು ಮತ್ತು ಅವುಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ನಿರುದ್ಯೋಗ ಭತ್ಯೆ…ಹೀಗೆ ಒಂದೇ ಎರಡೇ



