ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಆಪ್ ಆಧಾರಿತ ಕ್ಯಾಬ್ ಚಾಲಕರು ಇಂಧನ ಬೆಲೆ ಹೆಚ್ಚಳ ನೆಪವೊಡ್ಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಕ್ಯಾಬ್ ಬುಕ್ ಮಾಡಿದರೆ ಪ್ರಯಾಣಿಕರಿಗೆ ಕರೆ ಮಾಡುವ ಚಾಲಕರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಾರೆ. ಸಮೀಪವೇ ಇದ್ದರೆ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇಲ್ಲದಿದ್ದರೆ ಕನಿಷ್ಠ ೧೦೦ ರೂ. ನೀಡಬೇಕು ಎಂದು ತಾಕೀತು ಮಾಡುತ್ತಾರೆ. ಆಪ್ನಲ್ಲಿ ೭೦ ರೂ. ತೋರಿಸುತ್ತಿದ್ದರೂ ೧೦೦ ರೂ. ಕೊಡಿ ಎನ್ನುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಕಂಪೆನಿಗಳನ್ನು ಕೇಳಿ ಎಂದರೆ ನಾವೇಕೆ ಕೇಳಬೇಕು ಎನ್ನುತ್ತಾರೆ. ಪ್ರಯಾಣದ ದರ ೧೦೦ ರೂ. ಮೀರಿದರೆ ಇನ್ನೂ ಹೆಚ್ಚು ಹಣವನ್ನು ಕೊಡಬೇಕು ಎಂದು ವಿತಂಡವಾದ ಮಾಡುತ್ತಾರೆ. ಸಂಬಂಧಪಟ್ಟವರು ಈಗಲಾದರೂ ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ಆಪ್ ಆಧಾರಿತ ಕ್ಯಾಬ್ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರ ಹಿತವನ್ನು ಕಾಪಾಡಬೇಕಾಗಿದೆ.
– ಮಹತಿ, ಮೈಸೂರು





