ಬೆಂಗಳೂರು: ಆನ್ಲೈನ್ನಲ್ಲಿ ಔಷಧಿಗಳ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.90ರಷ್ಟು ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ.
ಕೆಲವು ಕಡೆ ಮಾತ್ರ ಬೆರಳಣಿಕೆಯಷ್ಟು ಅಂಗಡಿಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಟಾಚಾರಕ್ಕೆ ಬಂದ್ ಆಗಿದ್ದವು. 12 ಗಂಟೆ ನಂತರ ಅವುಗಳು ಕೂಡ ಕಾರ್ಯ ನಿರ್ವಹಿಸಿದವು. ಹೀಗಾಗಿ ಸಾರ್ವಜನಿಕರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ.
ಆದರೆ ಬೆಂಗಳೂರು ಹೊರತುಪಡಿಸಿ ಚಾಮರಾಜನಗರ, ಮಡಿಕೇರಿ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆ 9 ಗಂಟೆಯಿಂದಲೇ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಔಷಧಿ ಅಂಗಡಿಗಳು ತೆರೆಯದೇ ಬಂದ್ಗೆ ಬೆಂಬಲ ಸೂಚಿಸಿದ್ದವು.
ಇನ್ನು ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಔಷಧಿ ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು, ಸರಬರಾಜುದಾರರು ಮತ್ತಿತರರು ಕಪ್ಪುಪಟ್ಟಿ ಕಟ್ಟಿಕೊಂಡು ಬಂದ್ಗೆ ಬೆಂಬಲ ಕೊಟ್ಟಿದ್ದರು.
ನಾವು ಸಂಘದವರು ಕರೆ ಕೊಟ್ಟಿರುವ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಹೆಚ್ಚು ಔಷಧಿ ಅಂಗಡಿಗಳಿವೆ. ರೋಗಿಗಳ ಸೇವೆಗೆ ತೊಂದರೆಯಾಗಬಾರದು. ನಾವು ಇರೋದೆ ಸಾರ್ವಜನಿಕರ ಸೇವೆಗೆ. ಹೀಗಾಗಿ ಅಂಗಡಿಗಳನ್ನು ಬಂದ್ ಮಾಡದೆ ನೈತಿಕ ಬೆಂಬಲ ಕೊಡುತ್ತೇವೆ ಎಂದು ಬೃಹತ್ ಬೆಂಗಳೂರು ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಮಾಯಣ್ಣ ಹೇಳಿದ್ದಾರೆ.




