ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಾಲಕನ ಬಲಿ ಪಡೆದ ಚಿರತೆ ಒಂದೆಡೆಯಾದರೇ ಮಾವು, ಹಲಸಿನ ಆಸೆಗೆ ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳ ಭೀತಿ ಮತ್ತೊಂದೆಡೆಯಾಗಿದೆ.
ಮಲೆ ಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ಇಂಡಿಗನತ್ತ ಸುತ್ತಮುತ್ತ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ. ಈ ಬೆನ್ನಲ್ಲೇ ಹಲಸು ಮತ್ತು ಮಾವಿನ ಆಸೆಗೆ ಇಂಡಿಗನತ್ತ ಗ್ರಾಮಕ್ಕೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಇಂಡಿಗನತ್ತವು ಅರಣ್ಯ ಪ್ರದೇಶದೊಳಗಿನ ಗ್ರಾಮವಾಗಿದ್ದು, ಚಿರತೆ ಆತಂಕ ಒಂದೆಡೆಯಾದರೇ ಕಾಡಾನೆ ಭೀತಿ ಮತ್ತೊಂದೆಡೆಯಾಗಿದೆ.
ಬಾಲಕ ಮೃತಪಟ್ಟ ಬಳಿಕ ಅಲ್ಲಿನ ಗ್ರಾಮದ ಜನರು ಮನೆಯಿಂದ ಹೊರಬರಲಾರದಷ್ಟು ಭಯಭೀತರಾಗಿದ್ದಾರೆ. ಇದರೊಟ್ಟಿಗೆ ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಕಾಡಾನೆ ಹಾವಳಿಯೂ ಹೆಚ್ಚಾಗಿದೆ.
ಗ್ರಾಮದ ಸಿದ್ದರಾಜು ಎಂಬುವವರ ಮನೆ ಬಳಿ ಇರುವ ಹಲಸಿನ ಮರದಲ್ಲಿ ಹಣ್ಣುಗಳನ್ನು ತಿನ್ನಲು ಇಡೀ ರಾತ್ರಿ ಆನೆ ಬೀಡುಬಿಟ್ಟಿದ್ದರಿಂದ ಗ್ರಾಮಸ್ಥರು ಮತ್ತಷ್ಟು ಚಿಂತೆಗೀಡಾಗಿದ್ದಾರೆ.





