Mysore
21
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಮೈಸೂರು | ನೆಲಕಪ್ಪಳಿಸಿದ ಭಾರಿ ಗಾತ್ರದ ಮರ; ಕಾರು,ಆಟೋ ಜಖಂ

ಮೈಸೂರು : ಬೇರುಗಳಲ್ಲಿ ಸತ್ವ ಕಳೆದುಕೊಂಡು ಭಾರಿಗಾತ್ರದ ಬೇವಿನ ಮರ ಶನಿವಾರ ಧರೆಗುಳಿರದ ಪರಿಣಾಮ, ಒಂದು ಕಾರು, ಆಟೋ, ಬೈಕ್ ಜಖಂಗೊಂಡಿದ್ದು, ಯಾವುದೇ ಜೀವಹಾನಿಯಾಗಿಲ್ಲ.

ನಗರದ ನಗರ ಕೇಂದ್ರ ಗ್ರಂಥಾಲಯದ ಮುಂಭಾಗದ, ಸಂಭ್ರಮ ಹೋಟೆಲ್ ಮತ್ತು ಬಾರ್‌ನ ಕಾಂಪೌಂಡ್ ಒಳಗಡೆಯಿದ್ದ ಬೃಹತ್‌ಗಾತ್ರದ ಹಳೆಯ ಬೇವಿನ ಮರ ಏಕಾಏಕಿ ನೆಲಕ್ಕುರಳಿದೆ. ಮೂರ‍್ನಾಲ್ಕು ದಿನಗಳ ಹಿಂದೆ ಧಾರಕಾರ ಮಳೆ ಬಿದ್ದಿದ್ದರಿಂದ ಮರದ ಬೇರುಗಳು ಸಡಿಲಗೊಂಡಿದ್ದವು. ಇದರಿಂದ ಭಾರ ತಾಳಲಾದರೆ, ಚಿಗುರಿ ಹಸಿರಾಗಿದ್ದ ಮರ ನೆಲಕ್ಕುರಿಳಿದಿದೆ.

ಮಧ್ಯಾಹ್ನ 3.30ರ ಸಮಯದಲ್ಲಿ ಘಟನೆ ನಡೆದಿದ್ದು, ಪಕ್ಕದಲ್ಲೆ ಇದ್ದ ಕಾಂಪೌಂಡ್‌ ಉರುಳಿದೆ. ಕಾಂಪೌಂಡ್ ಪಕ್ಕದಲ್ಲಿ ಆಟೋ ನಿಲ್ಲಿಸಲಾಗಿತು. ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್‌ನಲ್ಲಿ ಸವಾರರೊಬ್ಬರು ರಸ್ತೆಯಲ್ಲಿ ಸಾಗುವಾಗ, ಮರದ ರೆಂಬೆಕೊಂಬೆಗಳು ತಾಗಿ ಬೈಕ್ ಮೇಲೆ ಬಿದ್ದಿವೆ. ಸವಾರರಿಗೆ ತಲೆಗೆ ಸಣ್ಣ ಗಾಯವಾಗಿದ್ದು, ಕೂಡಲೇ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಹೊಸ ಸ್ವಿಫ್ಟ್ ಕಾರ್‌ನ ಮೇಲೆ ದಿಢೀರನೆ ಮರಬಿದ್ದಿದೆ. ಬಿದ್ದ ರಬಸಕ್ಕೆ ಕಾರ್ ಮೇಲ್ಬಾಗ, ಹಿಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನ ಎಲ್ಲ ಗ್ಲಾಸ್‌ಗಳು ಪುಡಿಪುಡಿಯಾಗಿವೆ.‌

ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಮರದ ಕೆಳಭಾಗದಲ್ಲಿ ವಿದ್ಯುತ್ ಕಂಬಗಳಿದ್ದು, ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ತಂತಿಗಳು ತುಂಡಾದ ಪರಿಣಾಮ ತಕ್ಷಣವೇ ವಿದ್ಯುತ್ ವ್ಯತ್ಯಯವಾಗಿದ್ದು, ಭಾರಿ ಅನಾಹುತ ತಪ್ಪಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿ, ಸವಾರರು ಟ್ರಾಫಿಕ್ ಸಮಸ್ಯೆ ಎದುರಿಸುವಂತಾಯಿತು. ವಿಷಯ ತಿಳಿದು ಕೂಡಲೇ ಸಂಚಾರ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದರು. ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಹಾಗೂ ಮಷಿನ್ ಮೂಲಕ ಮರ ತುಂಡರಿಸಿ ಮರ ತೆರವುಗೊಳಿಸಿದರು. ಬಳಿಕ ವಾಹನ ಸವಾರರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ವಾರಂತ್ಯದಲ್ಲಿ ಅಪಾರ ಜನಸಂದಣಿಯಿದ್ದರು, ಯಾವುದೇ ಪ್ರಾಣಹಾನಿಯಾಗಿಲ್ಲ.

Tags:
error: Content is protected !!