Mysore
34
few clouds

Social Media

ಮಂಗಳವಾರ, 12 ಮೇ 2026
Light
Dark

ಚಾ.ನಗರ | ಟೊಮೆಟೊ ದರ ಕುಸಿತ; ರೈತರಿಂದ ಹೆದ್ದಾರಿ ತಡೆ

ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ಹೆದ್ದಾರಿ ಸಂಚಾರ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಮೈಸೂರು, ಗುಂಡ್ಲುಪೇಟೆ, ತೆರಕಣಾಂಬಿ ಮಾರುಕಟ್ಟೆಗೆ ಹೋಲಿಸಿದರೆ ಚಿಕ್ಕಹೊಳೆಯಲ್ಲಿ ಟೊಮೆಟೊ ಬೆಲೆಯನ್ನು ತೀವ್ರ ಇಳಿಸಲಾಗಿದೆ. 5ರಿಂದ 6 ರೂ.ವರೆಗೆ ದರ ಇಳಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವದ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ ,ಯಾವ ಮಾನದಂಡದ ಮೇಲೆ ಟೊಮೆಟೊ ಬೆಲೆಯನ್ನು ನಿಗದಿಪಡಿಸಲಾಗಿದೆ. ಬೆಲೆ ದಿಢೀರ್ ಕುಸಿಯಲು ಕಾರಣ ಯಾರು? ನೆರೆಯ ಮೈಸೂರು, ಜಿಲ್ಲೆಗೊಂದು ದರ, ಚಾಮರಾಜನಗರ ಜಿಲ್ಲೆಗೊಂದು ದರ ನಿಗದಿ ಮಾಡಿರುವುದೇಕೆ ಎಂದು ಪ್ರಶ್ನಿಸಿದರು.

ರೈತರ ನೆರವಿಗೆ ಧಾವಿಸಬೇಕಾಗಿರುವ ಎಪಿಎಂಸಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ಖಂಡನೀಯ. ರೈತರಿಂದ ಶೇ 10 ಕಮಿಷನ್ ವಸೂಲಿ ಮಾಡುತ್ತಿದ್ದು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ತಡೆಯಬೇಕು, ರೈತರಿಗೆ ನ್ಯಾಯಯುತ ಬೆಲೆ ಕೊಡಿಸಬೇಕು ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಮಾ 16ರಂದು ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರು ಹಾಗೂ ಕಮಿಷನ್ ಏಜೆಂಟರ್ ಸಭೆ ನಡೆಯಲಿದ್ದು ಎಲ್ಲರೂ ಭಾಗವಹಿಸಬೇಕು ಎಂದರು. ಜಿಲ್ಲಾಧಿಕಾರಿ ಸಭೆಯ ಬಳಿಕ ರೈತರೇ ಇಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲು ತೀರ್ಮಾನ ಮಾಡಿರುವುದಾಗಿ ಹೊನ್ನೂರು ಪ್ರಕಾಶ್ ಹೇಳಿದರು.

ಮುಖಂಡರಾದ ಅರಕಲವಾಡಿ ಮಹೇಶ್, ಕಿರಣ್ ಕೊತ್ತಲವಾಡಿ, ಮಂಜು, ಪುಣಜೂರು ಚಂದ್ರು, ರಂಗನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!