ಮೈಸೂರು: ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಕೃಷಿ ವಲಯದ ಮೇಲೂ ಬಿದ್ದಿದ್ದು, ಕೃಷಿ ಚಟುವಟಿಕೆ ಆರಂಭಿಸುವ ವೇಳೆ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಒಂದಾದ ನೀರಾವರಿ ಪೈಪ್ ಗಳ ಬೆಲೆಯೂ ಏರಿಕೆಯಾಗಿದೆ.
ರೂ. 335ರಿಂದ ರೂ. 365ರೂ.ಗಳಿದ್ದ ಪೈಪ್ ಗಳ ಬೆಲೆ ಈಗ ಸರಾಸರಿ 365-395 ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಅಲ್ಲದೇ ಬಿತ್ತನೆ ಬೀಜ, ಗೊಬ್ಬರಗಳ ಬೆಲೆ ಏರಿಕೆಯ ನಡುವೆ ಈಗ ಪೈಪ್ಗಳ ಬೆಲೆಯೂ ಏರಿಕೆಯಾಗಿರುವುದು ರೈತರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಫೆಬ್ರವರಿ ಆರಂಭದಲ್ಲಿಯೇ ಭೂಮಿಗಳನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳುತ್ತಿದ್ದ ರೈತರು ಈಗಾಗಲೇ ಶುಂಠಿ, ಬಾಳೆ ಹಾಗೂ ಇತರೆ ಬೆಳೆಗಳಿಗೆ ಸಿದ್ಧತೆ ಮಾಡಿ ಮುಗಿಸಿದ್ದಾರೆ. ಇನ್ನೇನು ಆ ಜಮೀನುಗಳಿಗೆ ಪೈಪ್ ಲೈನ್ ಮಾಡಬೇಕು ಎನ್ನುವಷ್ಟರಲ್ಲಿಯೇ ಈ ಬೆಲೆ ಏರಿಕೆಯಾಗಿರುವುದು ನಿಜಕ್ಕೂ ಆಘಾತಕಾರಿ ಎಂಬುದು ರೈತರ ಅನಿಸಿಕೆಯಾಗಿದೆ.
ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಲಾಭ ಕಡಿಮೆ ಎಂಬ ಅಭಿಪ್ರಾಯವಿದ್ದು, ರೈತರು ಕೃಷಿ ತೊರೆಯುತ್ತಿದ್ದಾರೆ. ಈ ನಡುವೆಯೇ ಇಂತಹ ಬೆಲೆ ಏರಿಕೆಗಳು ರೈತರನ್ನು ಕೃಷಿಯಿಂದ ದೂರ ಮಾಡಲಿವೆ ಎಂಬುದು ರೈತರ ಆತಂಕವಾಗಿದೆ.





