Mysore
33
few clouds

Social Media

ಮಂಗಳವಾರ, 03 ಮಾರ್ಚ್ 2026
Light
Dark

ಹನೂರು: ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ: ಜಿಲ್ಲಾಧಿಕಾರಿ ಶ್ರೀರೂಪ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಈಗಾಗಲೇ ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ರೂಪ ತಿಳಿಸಿದರು.

ತಾಲ್ಲೂಕಿನ ತೊಳಸಿಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.

ಕಾಡಂಚಿನ ಗ್ರಾಮದಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಈಗಾಗಲೇ ನಿಗಾ ವಹಿಸಲಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದೆ. ಜೊತೆಗೆ ರೈತಾಪಿ ವರ್ಗದವರು ಪ್ರಸ್ತುತ ತಾವು ಸ್ಥಳೀಯವಾಗಿ ಬೆಳೆಯುವಂತಹ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವಂತಹ ಖಾದ್ಯಗಳನ್ನು ಮತ್ತಷ್ಟು ಬಲವರ್ಧನೆ ಮಾಡಿಕೊಂಡು ಅದರ ಮೂಲಕವೇ ತಾವು ಆರ್ಥಿಕವಾಗಿ ಸಬಲರಾಗಬೇಕು. ಜೊತೆಗೆ ಸಿದ್ದಪಡಿಸಿರುವಂತಹ ಖಾದ್ಯಗಳನ್ನು ಮಾರಾಟ ಮಾಡಲು ಮಲೆ ಮಾದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ತಮಗೆ ಕೊಠಡಿಯನ್ನ ನಿಗದಿಪಡಿಸಲಾಗುವುದು. ಅದರ ಸದುಪಯೋಗವನ್ನು ಸಹ ಪಡೆದುಕೊಳ್ಳಬೇಕು. ಅಲ್ಲದೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯನ್ನು ಮಕ್ಕಳು ಬಿಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಭಾಗದಲ್ಲೇ ಒಂದು ಪ್ರೌಢಶಾಲಾ ತೆರೆಯುವಂತಹ ಯೋಚನೆ ಕೂಡ ಮಾಡಲಾಗಿದೆ ಎಂದರು.

ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಈ ದೇಶದ ಜನತೆ ಶಾಂತಿ ನೆಮ್ಮದಿಯಾಗಿರಲು ರೈತ ಹಾಗೂ ಸೈನಿಕರಿಂದ ಮಾತ್ರ ಸಾಧ್ಯ, ರೈತ ವ್ಯವಸಾಯ ಮಾಡಿ ಅನ್ನ ಕೊಡದಿದ್ದರೆ ನಾವೆಲ್ಲರೂ ಹಸಿವಿನಿಂದ ಸಾಯಬೇಕು. ಹೀಗಾಗಿ ದೇಶದಲ್ಲಿ ಅಗ್ರಮಾನ್ಯ ಸ್ಥಾನ ರೈತರಿಗೆ ಸಿಗಬೇಕು. ರಾಜ್ಯದ ವಿವಿಧಡೆ ರೈತರಿಗೆ ನಾಲೆ ಹಾಗೂ ಜಲಾಶಯದ ಮುಖಾಂತರ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ ಆದರೆ ನಮ್ಮ ಭಾಗದಲ್ಲಿ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲದಿದ್ದರೂ ಮಲೆ ಮಹದೇಶ್ವರ ಬೆಟ್ಟದ ಭಾಗದ ರೈತರು ವರುಣಾಯನ ಕೃಪಾಕಟಾಕ್ಷದಿಂದಲೇ ಬೆಳೆ ಬೆಳೆಯುತ್ತಿದ್ದಾರೆ. ಜೊತೆಗೆ ಇಲ್ಲಿ ಬೆಳೆಯುವ ಸಿರಿಧಾನ್ಯಗಳು ಮೌಲ್ಯವರ್ಧನೆಯಾಗಬೇಕಿದೆ. ಜೊತೆಗೆ ಮಕ್ಕಳನ್ನು ಅರ್ಧದಲ್ಲೇ ಶಾಲೆ ಬಿಡಿಸುವುದು ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಹಾಗಾಗಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಒಳ್ಳೆಯ ಶಿಕ್ಷಣ ಕೊಡಿಸಿ ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾತನಾಡಿ, ದೇಶದ ಬೆನ್ನೆಲಬು ರೈತ, ನಾನು ಸಹ ರೈತನ ಮಗನಾಗಿದ್ದು ಒಂದು ಬೆಳೆ ಬೆಳೆಯಲು ಎಷ್ಟು ಕಷ್ಟವಿದೆ ಎಂಬುದು ನನಗೂ ಸಹ ತಿಳಿದಿದೆ. ರೈತ ತಾನು ಕಷ್ಟಪಟ್ಟು ಹಗಲು-ರಾತ್ರಿ ನಿದ್ದೆ ಮಾಡದೆ ವ್ಯವಸಾಯ ಮಾಡಿ ದೇಶಕ್ಕೆ ಅನ್ನ ನೀಡದಿದ್ದರೆ ಪ್ರತಿಯೊಬ್ಬರು ಪ್ರತಿನಿತ್ಯ ಪರಿತಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಲೆ ಮಾದೇಶ್ವರ ಬೆಟ್ಟ ತಪ್ಪಲಿನಲ್ಲಿರುವ ರೈತರು ಕಾಡು ಪ್ರಾಣಿಗಳ ಹಾವಳಿಯ ನಡುವೆಯೂ ಗುಣಮಟ್ಟದ ರಾಗಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಬೆಳೆಯುವ ಆಹಾರ ಪದಾರ್ಥಗಳ ಮಾರಾಟಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನಸಂದಣಿ ಇರುವ ಕಡೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು ಸಂಘದವರು ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಡಿಸಿಎಫ್ ಭಾಸ್ಕರ್ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಬರುವ ಇಂಡಿಗನತ್ತ, ಮೆಂದಾರೆ, ತೊಳಸಿಕೆರೆ ಸೇರಿದಂತೆ ಒಟ್ಟು ನಾಲ್ಕು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ವತಿಯಿಂದ ಅನುಮೋದನೆಯಾಗಿದೆ. ಈ ಆದೇಶದ ಪ್ರತಿ ರಾಜ್ಯ ಸರ್ಕಾರಕ್ಕೆ ಸಿಕ್ಕ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಡಲಾಗುವುದು, ಉಳಿದಂತೆ ತೊಕೆರೆ ಕೊಕ್ಕಬರೆ ದೊಡ್ಡಾಣೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ ಮುಂದಿನ ಸಭೆಯಲ್ಲಿ ಇಟ್ಟು ಅನುಮೋದನೆಯಾದ ನಂತರ ಈ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ತಿಳಿಸಿದರು.

 

 

Tags:
error: Content is protected !!