ನಂಜನಗೂಡು: ಪಾಗಲ್ ಪ್ರೇಮಿಯೋರ್ವ ಪ್ರೀತಿಸುವಂತೆ ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದ ಪರಿಣಾಮ ಮನನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಂಜನಗೂಡಿನ ನೀಲಕಂಠ ನಗರದ ದಿವ್ಯಾ ಎಂದು ಗುರುತಿಸಲಾಗಿದೆ. ದಿವ್ಯಾಳಿಗೆ ಆದಿತ್ಯ ಎಂಬಾತ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದ ಬಾಲಕಿ ತೀವ್ರವಾಗಿ ನೊಂದಿದ್ದಳು.
ಈ ಬಗ್ಗೆ ಪೋಷಕರಿಗೂ ದಿವ್ಯಾ ವಿಷಯ ತಿಳಿಸಿದ್ದಳು. ಪೋಷಕರು ಆದಿತ್ಯನನ್ನು ಕರೆಸಿ ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆದಿತ್ಯ ಮತ್ತೆ ಮತ್ತೆ ದಿವ್ಯಾಗೆ ಕಿರುಕುಳ ನೀಡುತ್ತಿದ್ದ.
ಇದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಪೋಷಕರು ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





