Mysore
28
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಶಾಲಾವರಣಕ್ಕೆ ಬರುವ ನಾಯಿಗಳ ವರದಿ ಶಿಕ್ಷಕರ ಹೆಗಲಿಗೆ!  

ಎಸ್.ಎಸ್.ಭಟ್

ನಾಯಿಗಳ ಪಟ್ಟಿ ಮಾಡಿ ನೋಡಲ್ ಅಧಿಕಾರಿಗಳಿಗೆ ವರದಿ ಮಾಡಲು ಶಿಕ್ಷಕರಿಗೆ ಸೂಚನೆ

ನಂಜನಗೂಡು: ಶಾಲೆ ಆವರಣಕ್ಕೆ ಬರುವ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವ ಹೊಣೆ ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರ ಹೆಗಲೇರಿದ್ದು, ಅವರು ಈಗ ಮಕ್ಕಳೊಂದಿಗೆ ನಾಯಿಗಳನ್ನೂ ಗಮನಿಸಿ ಪಟ್ಟಿ ಮಾಡಿ ವರದಿ ಸಲ್ಲಿಸಬೇಕಿದೆ.

ಸುಪ್ರೀಂ ಕೋರ್ಟ್ ಬೀದಿನಾಯಿಗಳ ನಿಯಂತ್ರಣಕ್ಕೆ ಆದೇಶ ನೀಡಿದ್ದು, ಆ ಆದೇಶದ ಪರಿಪಾಲನೆಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ವಹಿಸಿದೆ. ಆದರೆ ಸ್ಥಳೀಯ ಸಂಸ್ಥೆಗಳು ಶಾಲಾ ಆವರಣಕ್ಕೆ ಬರುವ ಬೀದಿ ನಾಯಿಗಳ ಬಗ್ಗೆ ನಿಗಾ ವಹಿಸಲು ಶಿಕ್ಷಣ ಇಲಾಖೆಗೆ ಜವಾಬ್ದಾರಿ ವಹಿಸಿದೆ. ಹಾಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಶಾಲಾ ಆವರಣಕ್ಕೆ ಬರುವ ಶ್ವಾನಗಳ ಮೇಲೆ ನಿಗಾ ಇರಿಸಬೇಕಿದೆ. ಸ್ಥಳೀಯ ಸಂಸ್ಥೆಗಳು ಈ ಕುರಿತಂತೆ ತಮ್ಮ ವ್ಯಾಪ್ತಿಯ ಪ್ರತಿಯೊಂದು ಕಿರಿಯ ಹಾಗೂ ಹಿರಿಯ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೂ ನೋಟಿಸ್ ನೀಡಿದೆ

ಪ್ರಾಥಮಿಕ ಶಾಲಾ ಆವರಣ ಹಾಗೂ ಸುತ್ತಲಿನ ಪ್ರದೇಶಗಳ ನಾಯಿಗಳನ್ನು ಪಟ್ಟಿ ಮಾಡಿ ನೋಡಲ್ ಅಽಕಾರಿಗಳಿಗೆ ವರದಿ ಮಾಡುವುದೂ ಸೇರಿದಂತೆ ಅವುಗಳ ಸ್ಥಳಾಂತರಕ್ಕೆ ಸಹಕರಿಸಬೇಕು. ಸ್ಥಳಾಂತರದ ನಂತರವೂ ಅವುಗಳು ಮತ್ತೆ ಅದೇ ಸ್ಥಳದಲ್ಲಿ ನಾಯಿಗಳು ಕಾಣಿಸಿಕೊಂಡರೆ ನಿಮ್ಮನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎನ್ನುವುದು ಆ ನೋಟಿಸ್‌ನಲ್ಲಿರುವುದು ಶಿಕ್ಷಕರನ್ನು ತಲ್ಲಣಗೊಳಿಸಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು, ಮಕ್ಕಳ ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮುಗಿಸಬೇಕಾದ ನಮ್ಮನ್ನು ನಾಯಿ ಕಾಯಲು ನೇಮಿಸಿದರೆ ಆ ಮಕ್ಕಳ ಪಾಠದ ಗತಿ ಏನು ಎಂಬುದು ಶಿಕ್ಷಕರ ಅಳಲಾಗಿದೆ.

” ಮನೆಗಣತಿ, ಜನಗಣತಿ, ಬಿಸಿಯೂಟ, ಅಕ್ಷರ ದಾಸೋಹ ಸೇರಿದಂತೆ ಸರ್ಕಾರ ವಹಿಸಿರುವ ವಿವಿಧ ಜವಾಬ್ದಾರಿಗಳನ್ನು ಹೊತ್ತು ಬಸವಳಿಯುತ್ತಿರುವ ಶಿಕ್ಷಕರ ಪಾಲಿಗೆ ಈಗಲೇ ನೆಮ್ಮದಿ ಇಲ್ಲ. ಈಗ ಬೀದಿನಾಯಿಗಳನ್ನೂ ಇವರ ಹೆಗಲೇರಿಸಿದರೆ ಶಿಕ್ಷಕರ ಪಾಡೇ ನಾಯಿಪಾಡಾಗುತ್ತದೆ. ಈ ಬಗ್ಗೆ ಸಂಘದ ರಾಜ್ಯ ಪದಾಧಿಕಾರಿಗಳ ಜೊತೆ ಮಾತನಾಡಲಾಗುತ್ತಿದೆ.”

-ಸೋಮೇಗೌಡ, ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

” ಸರ್ಕಾರದ ಆದೇಶವನ್ನು ಸ್ಥಳೀಯ ಸಂಸ್ಥೆಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಶಿಕ್ಷಕರು ನಾಯಿಗಳ ಸಾಗಾಣಿಕೆಗಾಗಲಿ, ನಾಯಿಗಳನ್ನು ಹಿಡಿಯಲಾಗಲಿ ಹೋಗಬೇಕಿಲ್ಲ. ಶಾಲೆಯ ಸಮೀಪ ಬರುವ ನಾಯಿಗಳ ಬಗ್ಗೆ ಅಧಿಕೃತವಾಗಿ ಸ್ಥಳೀಯ ಸಂಸ್ಥೆಗಳ ನೋಡಲ್ ಅಧಿಕಾರಿಗಳಿಗೆ ತಿಳಿಸುವುದು ಮಾತ್ರ ಶಿಕ್ಷಕರ ಜವಾಬ್ದಾರಿಯಾಗಿದೆ. ಈಕುರಿತು ಇಲಾಖೆಯ ಉನ್ನತಾಧಿಕಾರಿಗಳ ಜೊತೆಯೂ ಚರ್ಚಿಸಲಾಗಿದೆ. ಕಳೆದ ವರ್ಷ ಮೈಸೂರು ಜಿಲ್ಲೆಯಲ್ಲೇ ೨೩,೦೦೦ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ.”

-ಡಿ.ಉದಯಕುಮಾರ್, ಡಿಡಿಪಿಐ, ಮೈಸೂರು

Tags:
error: Content is protected !!