Mysore
28
broken clouds

Social Media

ಬುಧವಾರ, 14 ಜನವರಿ 2026
Light
Dark

ಮಿಶ್ರ ಬೆಳೆ ಬೆಳೆದು ಮಾದರಿಯಾದ ಅಣೂರಿನ ರೈತ

ಅಣ್ಣೂರು ಸತೀಶ್

ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದ ರೈತರೊಬ್ಬರು ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮದ ರೈತ ಸಂಪತ್ತು ಎಂಬವರು ತಮ್ಮ ಮನೆಯ ಪಕ್ಕದ ಒಂದೂವರೆ ಗುಂಟೆ ಜಾಗದಲ್ಲಿ ೫೦ಕ್ಕೂ ಹೆಚ್ಚು ತಳಿಯ ಹೂವು, ತರಕಾರಿ, ಹಣ್ಣು, ವಿವಿಧ ರೀತಿಯ ಸೊಪ್ಪು ಬೆಳೆಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.

ಮನೆಯ ಪಕ್ಕದಲ್ಲಿಯೇ ಇರುವ ಜಾಗದ ಸುತ್ತ ಕಾಂಪೌಂಡ್ ನಿರ್ಮಿಸಿ ಕೈತೋಟ ಮಾಡಿಕೊಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ಸಂಜೆ ಮಲ್ಲಿಗೆ, ಕನಕಾಂಬರ, ಸೇವಂತಿ, ದಾಸವಾಳ, ಗುಲಾಬಿ, ಕಾಕಡ, ನೆಲ ಗುಲಾಬಿ, ಪಾರಿ ಜಾತ, ಸಂಪಿಗೆ ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ತರಕಾರಿಗಳಾದ ಟೊಮ್ಯಾಟೋ, ಬದನೆಕಾಯಿ, ಮೆಣಸಿನಕಾಯಿ, ಗೆಡ್ಡೆಕೋಸು, ಮೂಲಂಗಿ, ಬೀನ್ಸ್, ತೊಗರಿ, ಬೆಂಡೆ, ಹಿತ್ತಲ ಅವರೆ, ಈರೇಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡುವಲಕಾಯಿ, ದಪ್ಪಮೆಣಸಿನಕಾಯಿ, ಶುಂಠಿ, ಸೊಪ್ಪುಗಳಾದ ಪಾಲಾಕ್, ಮೆಂತ್ಯ, ಕೊತ್ತಂಬರಿ, ಕರಿಬೇವು, ನುಗ್ಗೆ, ಪಲಾವ್ ಎಲೆ, ಸಬ್ಬಕ್ಕಿ, ವೀಳ್ಯದೆಲೆ ಬೆಳೆದಿದ್ದಾರೆ.

ಹಣ್ಣುಗಳಲ್ಲಿ ಬಾಳೆ, ಸಪೋಟ, ಸೀಬೆ, ಸೇಬು, ಕಿತ್ತಳೆ, ಮೂಸಂಬಿ, ಡ್ರಾಗನ್ ಫ್ರೂಟ್, ಬಟರ್, ಬಾದಾಮಿ, ಪಪ್ಪಾಯಿ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಚಕ್ಕೆ, ಏಲಕ್ಕಿ, ಗೋಡಂಬಿ, ನೆಲ್ಲಿಕಾಯಿ ಸೇರಿದಂತೆ ತರಹೇವಾರಿ ಹಣ್ಣು, ಸೊಪ್ಪು, ಹೂವುಗಳನ್ನು ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ. ಜೊತೆಗೆ ಇರುವ ಜಾಗದಲ್ಲಿಯೇ ಪಕ್ಷಿಗಳಿಗಾಗಿ ಗೂಡುಗಳನ್ನು ಇಟ್ಟಿದ್ದಾರೆ. ಪಕ್ಷಿಗಳಿಗೆ ನೀರು, ಆಹಾರವನ್ನು ಇಡುವ ಮೂಲಕ ಪರಿಸರ ಪ್ರೇಮವನ್ನೂ ಮೆರೆದಿದ್ದಾರೆ.

ಇವರ ಕೈತೋಟಕ್ಕೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ನೆರೆಹೊರೆಯವರು ಕೂಡ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಕೈತೋಟವನ್ನು ನೋಡಿದ ಕೆಲವರು ತಾವೂ ಇದೇ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೈತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಕೊಟ್ಟಿಗೆ ಗೊಬ್ಬರ ಬಳಕೆ ಮಾಡುವ ಮೂಲಕ ಆರೋಗ್ಯಯುತ,ಸಾವಯವ ಆಹಾರ ಪದಾರ್ಥಗಳನ್ನು ಬೆಳೆಯುತ್ತಿದ್ದಾರೆ. ಮನೆ ಬಳಕೆಗೆ ಬೇಕಾದ ಹಣ್ಣು, ತರಕಾರಿ, ಹೂವು ಬೆಳೆದುಕೊಂಡು ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.

” ಪ್ರತಿಯೊಬ್ಬರೂ ಇದೇ ರೀತಿ ಕೈತೋಟ ಮಾಡಿಕೊಂಡು ತರಕಾರಿ ಬೆಳೆದು ಮನೆ ಬಳಕೆಗೆ ಉಪಯೋಗಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ವ್ಯರ್ಥವಾಗುವ ಸಮಯವನ್ನು ಕೈತೋಟ ಮಾಡಲು ಬಳಸಿದರೆ ಎಲ್ಲರ ಆರೋಗ್ಯವೂ ಉತ್ತಮವಾಗಿ ಇರಲಿದೆ.”

-ಸಂಪತ್, ಅಣ್ಣೂರು, ಮಿಶ್ರ ಬೆಳೆ ರೈತ

” ಸಂಪತ್ ಅವರ ೩೦-೪೦ ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಕೈತೋಟದ ಬಗ್ಗೆ ಎಲ್ಲರೂ ಆಕರ್ಷಿತರಾಗಿದ್ದಾರೆ. ಒಂದು ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಹೇಗೆ ಬೆಳೆದುಕೊಳ್ಳಬಹುದು ಎಂಬುದಕ್ಕೆ ಇದು ಮಾದರಿ ಪ್ರಯೋಗವಾಗಿದೆ. ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು.”

ಅಣ್ಣೂರು ನವೀನ್, ಗ್ರಾಮದ ಮುಖಂಡ

Tags:
error: Content is protected !!