ಮೈಸೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನ್ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ನಡೆಸಬೇಕೆಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ವಿ.ವಿಯ ಮಾನಸಗಂಗೋತ್ರಿಯ ಕ್ಲಾಕ್ಟವರ್ ಬಳಿ ಜಮಾವಣೆಗೊಂಡ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವಂತೆ ಹೇಳಿ 10 ವರ್ಷಗಳು ಕಳೆದವು, ಆದರೆ ಈವರೆಗೆ ಉದ್ಯೋಗ ನೀಡದೆ ವಂಚಿಸುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.
ಇನ್ನು ರಾಜ್ಯದಲ್ಲಿ ನಾವೇ ಆಯ್ಕೆ ಮಾಡಿದ ಕಾಂಗ್ರೆಸ್ ಸರ್ಕಾರ ಬ್ಯಾಕ್ಲಾಗ್ ಹುದ್ದೆ ಸಹ ತುಂಬುತ್ತಿಲ್ಲ, ನೇರ ನೇಮಕಾತಿಯಂತೂ ದೂರದ ಮಾತಾಗಿದೆ. ಸರ್ಕಾರಿ ಉದ್ಯೋಗಗಳನ್ನು ನೀಡಬೇಕಾದ ರಾಜ್ಯ ಸರ್ಕಾರ ಖಾಸಾಗಿ ಕಂಪನಿಯ ಜೊತೆಗೆ ಉದ್ಯೋಗ ಮೇಳ ಮಾಡುವ ಮೂಲಕ ಖಾಸಗಿ ಕಂಪನಿಗಳಿಗೆ ಬ್ರೋಕರ್ ಕೆಲಸ ಮಾಡಲು ಹೊರಟಿರುವುದು ನಾಚಿಕೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಶೋಧಕರ ಸಂಘದ ಮಾಜಿ ಅಧ್ಯಕ್ಷ ಶಿವಶಂಕರ್, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ವಿಶ್ವ ಪ್ರಸಾದ್, ಸಂಶೋಧಕರಾದ ಪ್ರದೀಪ್ ಮುಮ್ಮಡಿ, ಧೀರಾಜ್, ಪುನೀತ್ ಆಲನಹಳ್ಳಿ, ಕೃಷ್ಣ, ಗೌತಮ್, ರಮ್ಯಾ, ಸ್ನೇಹ, ಜಯ, ಮಮತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.





