ಹಾಸನ: ಆಸ್ತಿ ವಿಚಾರವಾಗಿ ಜಗಳವಾಗಿ ಮಗನೇ ತಂದೆ ಹಾಗೂ ಸಹೋದರನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ದೇವೇಗೌಡ ಹಾಗೂ ಸಹೋದರ ಮಂಜುನಾಥ್ ಎಂಬುವವರನ್ನು ಮೋಹನ್ ಎಂಬಾತ ಕೊಲೆ ಮಾಡಿದ್ದಾನೆ.
ಮಂಜುನಾಥ್ ಹಾಗೂ ಮೋಹನ್ ಇಬ್ಬರೂ ವಿವಾಹವಾಗಿರಲಿಲ್ಲ. ಮಂಜುನಾಥ್ ತಂದೆ-ತಾಯಿ ಜೊತೆ ವಾಸವಾಗಿದ್ದು, ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಾಗಿದ್ದ.
ತಂದೆ ದೇವೇಗೌಡ ಕಳೆದ ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಿದ ಹಣ ತನಗೂ ನೀಡಿಲ್ಲ ಎಂಬ ಕಾರಣಕ್ಕೆ ಕ್ಯಾತೆ ತೆಗೆದಿದ್ದ. ಇದೇ ಕಾರಣಕ್ಕೆ ಜಗಳವಾಗಿ ಮಧ್ಯರಾತ್ರಿ ಮಲಗಿದ್ದ ಸಹೋದರ ಮಂಜುನಾಥ್ನನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದಾಗ ತಂದೆಯ ಮೇಲೂ ಹಲ್ಲೆ ಮಾಡಿದ್ದಾನೆ.
ತಾಯಿಯ ಮೇಲೂ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ತಾಯಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ತಂದೆ ಹಾಗೂ ಸಹೋದರ ಇಬ್ಬರನ್ನೂ ಕೊಲೆ ಮಾಡಿ ತಾನೂ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೋಹನ್ನನ್ನು ಪೊಲೀಸರು ಬಂಧಿಸಿದ್ದಾರೆ.





