ಸತೀಶ್ ನೀನಾಸಂ ಅಭಿನಯದ ‘ಲವ್ ಇನ್ ಮಂಡ್ಯ’ ಚಿತ್ರದ ಮೂಲಕ ನಿರ್ದೇಶಕರಾದವರು ಅರಸು ಅಂತಾರೆ. ಒಂದು ಚಿತ್ರ ಮಾಡಿ ನಿರ್ದೇಶನದಿಂದ ದೂರವೇ ಉಳಿದಿದ್ದ ಅರಸು, ಇದೀಗ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ಗಣೇಶ್ ನಾಯಕನಾದರೆ, ಅಮೃತಾ ಅಯ್ಯರ್ ನಾಯಕಿ. ಈ ಚಿತ್ರದ ಮುಹೂರ್ತ ಭಾನುವಾರ, ರಾಮನವಮಿಯ ಅಂಗವಾಗಿ ನೆರವೇರಿದೆ.
ಎರಡನೇ ಚಿತ್ರದ ನಿರ್ದೇಶನಕ್ಕೆ ಯಾಕೆ ಇಷ್ಟು ತಡವಾಯಿತು ಎಂದು ವಿವರಿಸಿದ ಅರಸು, ‘ಚಿತ್ರವನ್ನು ಅಂದುಕೊಂಡ ಹಾಗೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಹಾಗಾಗಿ ಎರಡನೇ ಚಿತ್ರವನ್ನು ನಿರ್ದೇಶಿಸಲು ಇಷ್ಟು ಸಮಯವಾಯಿತು. ಈ ಚಿತ್ರದ ಕಥೆ ವಿಭಿನ್ನವಾಗಿದೆ. ಗಣೇಶ್ ಇದುವರೆಗೂ ಮಾಡಿರದ ಪಾತ್ರ ಹಾಗೂ ಕಥೆ ಅಂತ ಹೇಳಬಹುದು’ ಎಂದರು.
ಗಣೇಶ್ಗೆ ಅರಸು ಅಂತಾರೆ 2019ರಲ್ಲಿ ಕಥೆ ಹೇಳಲು ಬಂದರಂತೆ. ಆನಂತರ ಕೋವಿಡ್ ಮುಂತಾದ ಕಾರಣದಿಂದ ಆಗ ಕಥೆ ಕೇಳಲು ಆಗಿರಲಿಲ್ಲವಂತೆ. ಇತ್ತೀಚೆಗೆ ಅರಸು, ಗಣೇಶ್ಗೆ ಕಥೆ ಹೇಳಿದ್ದಾರೆ. ಅದನ್ನು ಕೇಳಿ ಇಷ್ಟವಾಗಿ ಗಣೇಶ್ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ‘ನಾನು ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡದಲ್ಲಿ ತುಂಬಾ ಒಳ್ಳೆಯ ಬರಹಗಾರರಿದ್ದಾರೆ. ಅವರೆಲ್ಲಾ ಸಿನಿಮಾ ಮಾಡಲು ಮುಂದೆ ಬರಬೇಕು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಖಂಡಿತ ಜನರು ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದರು
ಗಣೇಶ್ಗೆ ನಾಯಕಿಯಾಗಿ ಕನ್ನಡದವರೆ ಆದ ‘ಹನುಮ್ಯಾನ್’ ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ. ‘ನಾನು ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ಮೊದಲ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಗಣೇಶ್ ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ’ ಎಂದರು ಅಮೃತಾ ಅಯ್ಯರ್.
ಈ ಚಿತ್ರವನ್ನು ಎಸ್.ಎನ್.ಟಿ ಎಂಟರ್ಪ್ರೈಸ್ ಲಾಂಛನದಲ್ಲಿ ಎಸ್.ಸಿ.ರವಿ ಭದ್ರಾವತಿ ನಿರ್ಮಿಸುತ್ತಿದ್ದು, ಸದ್ಯಕ್ಕೆ ‘ಪ್ರೊಡಕ್ಷನ್ ನಂಬರ್ ಒನ್’ ಎಂದು ಕರೆಯಲಾಗುತ್ತಿದೆ. ಚಿತ್ರದಲ್ಲಿ ಗಣೇಶ್, ಅಮೃತಾ ಅಯ್ಯರ್ ಜೊತೆಗೆ ರಂಗಾಯಣ ರಘು, ರವಿಶಂಕರ್ ಗೌಡ, ‘ಕಾಕ್ರೋಚ್’ ಸುಧಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನವಿದ್ದು, ಮಹೇಶ್ ದೇವ್ ಡಿ.ಎನ್.ಪುರ ಚಿತ್ರಕಥೆ ಹಾಗೂ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ.





