Mysore
30
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಸಿ.ಟಿ.ರವಿ ವಿರುದ್ಧ ಕೇಸ್‌ ಎಥಿಕ್ಸ್‌ ಕಮಿಟಿಗೆ ರವಾನೆ: ಬಸವರಾಜ್‌ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಡುವಿನ ಕೇಸ್‌ ಅನ್ನು ವಿಧಾನ ಪರಿಷತ್‌ ಎಥಿಕ್ಸ್‌ ಕಮಿಟಿಗೆ ರವಾನಿಸಲಾಗಿದೆ ಎಂದು ಸಭಾಪತಿ ಬಸವರಾಜ್‌ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು(ಮಾರ್ಚ್.1) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರಕರಣ ಈಗಾಗಲೇ ಅಂತ್ಯವಾಗಿದೆ. ಈ ಬಗ್ಗೆ ನಾನು ಬೆಳಗಾವಿಯಲ್ಲೇ ರೂಲಿಂಗ್‌ ನೀಡಿದ್ದೆ. ಆದರೆ ಅವರಿಬ್ಬರೂ ಮತ್ತೊಮ್ಮೆ ದೂರು ನೀಡಿದ್ದಾರೆ. ಈ ಮಧ್ಯೆ ಇವರಿಬ್ಬರಿಗೂ ಸಂಧಾನ ಮಾಡಲು ಮುಂದಾಗಿದ್ದೆ, ಅವರು ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಎಥಿಕ್ಸ್‌ ಕಮಿಟಿಗೆ ನೀಡಿದ್ದೇನೆ ಎಂದು ಹೇಳಿದರು.

ಈ ಕೇಸ್‌ನ ಕುರಿತು ಎಥಿಕ್ಸ್‌ ಕಮಿಟಿ ವರದಿ ನೀಡಲು ಒಂದು ತಿಂಗಳವರೆಗೂ ಕಾಲಾವಕಾಶ ನೀಡಿದ್ದೇನೆ. ಅದರ ವರದಿ ಬಂದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇನೆ. ಆದರೆ ಈ ವಿಚಾರದ ಬಗ್ಗೆ ಸದನಲ್ಲಿ ಚರ್ಚೆ ಆಗುವುದಿಲ್ಲ. ಅಲ್ಲದೇ ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ‌ಇದ್ದರೂ, ಈಗ ಅವರದ್ದೇ ಕೇಸ್ ಬಂದಿರುವುದರಿಂದ ಅವರನ್ನು ಎಥಿಕ್ಸ್‌ ಕಮಿಟಿಯಿಂದ ಕೈ ಬಿಡಲಾಗಿದೆ ಎಂದರು.

ಇನ್ನು ಸದನದಲ್ಲಿ ಮುಗಿದದ್ದನ್ನ ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗ್ತಿರಲಿಲ್ಲ. ಸದನ ನಡೆಯದೇ ಇದ್ದಾಗ ಇದು ನಡೆದಿರೋದಕ್ಕೆ ಇಷ್ಟು ದೊಡ್ಡದು ಆಗಿದೆ. ಹಾಗಾಗಿ ಇದನ್ನು ಎಥಿಕ್ಸ್ ಕಮಿಟಿಗೆ ನೀಡಲಾಗಿದೆ. ಎಥಿಕ್ಸ್ ಕಮಿಟಿ ವರದಿ ನೀಡಲಿ ಮುಂದೆ ನೋಡೋಣ. ಎಥಿಕ್ಸ್ ಕಮಿಟಿಯಲ್ಲಿಯೇ 99% ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ. ಇಲ್ಲದೇ ಹೋದರೆ ಎಥಿಕ್ಸ್ ಕಮಿಟಿ ವರದಿಯನ್ನು ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Tags:
error: Content is protected !!