Mysore
18
broken clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಜಲಾನಯನ ಅಭಿವೃದ್ಧಿ | ಹೆಚ್ಚುವರಿ ಹಣ ಬಿಡುಗಡೆಗೆ ಕೇಂದ್ರ ಸಮ್ಮತಿ

ಬೆಂಗಳೂರು: ಜಲಾನಯನ ಅಭಿವೃದ್ಧಿ ಯೋಜನೆಗಳಲ್ಲಿ ಕರ್ನಾಟಕ ರಾಜ್ಯ ತೋರಿರುವ ಅಭೂತ ಪೂರ್ವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲೇ 8 ಹೊಸ ಯೋಜನೆಗಳಿಗೆ ಹೆಚ್ಚುವರಿ ರೂ.99 ಕೋಟಿಗಳು ಬಿಡುಗಡೆಗೆ ಮಂಜೂರಾತಿ ನೀಡಿದೆ.

ರಾಜ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿಅವರಿಗೆ ಈ ಬಗ್ಗೆ ಲಿಖಿತ ಪತ್ರ ಬರೆದಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ, ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ ಸಿಂಗ್ ಚೌವ್ಹಾಣ್, ಜಲಾನಯನ ಯೋಜನೆ 2.0 ಅಡಿಯಲ್ಲಿ ಹೊಸದಾಗಿ 39,413 ಹೆಕ್ಟೇರ್ನಲ್ಲಿ ಜಲಾನಯನ ಅಭಿವೃದ್ಧಿಗಾಗಿ ಮಂಜೂರಾಗಿ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ಭೂ ಸಂಪನ್ಮೂಲ ಸಚಿವಾಲಯದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು 2021-22 ರಿಂದ 2025-26ರವರೆಗೆ ಇದನ್ನು ಜಾರಿಗೊಳಿಸಲಾಗಿದೆ.

ದೇಶದಾದ್ಯಂತ ಈ ಯೋಜನೆಯಡಿ ಮಳೆಯಾಶ್ರಿತ ಭೂಮಿಯಲ್ಲಿ 50.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿಗಾಗಿ 1150 ಯೋಜನೆಗಳ ಅನುಷ್ಠಾನಕ್ಕೆ ರೂ.12303.33 ಕೋಟಿಗಳನ್ನು ಈಗಾಗಲೇ ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕ ರಾಜ್ಯದ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 63 ಜಲಾನಯನ ಅಭಿವೃದ್ಧಿ ಯೋಜನೆಗಳಿಗೆ ರೂ.679.61 ಕೋಟಿಗಳ ಮಂಜೂರಾತಿ ನೀಡಲಾಗಿದ್ದು ಇದರಲ್ಲಿ ಕೇಂದ್ರದ ಪಾಲಿನ ರೂ.348.79 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಹೆಚ್ಚುವರಿ ಭೂ ಪ್ರದೇಶಕ್ಕೆ ರೂ.99 ಕೋಟಿಗಳ ಅನುದಾನದ ಮಂಜೂರಾತಿ ನೀಡಿರುವುದಾಗಿ ಸಚಿವರಾದ ಶಿವರಾಜ ಸಿಂಗ್ ಚೌಹಾಣ್ ರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಯೋಜನೆಗಳ ಯಶಸ್ವಿ ಹಾಗೂ ಕಾಲಮಿತಿಯೊಳಗಿನ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವು ಅಗತ್ಯವೆಂದು ತಿಳಿಸಿದ್ದಾರೆ.

Tags:
error: Content is protected !!