Mysore
21
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ನ್ಯಾಯಾಲಯ ತೀರ್ಪು ನೀಡುವ ಮುನ್ನ ಹೆಸರು ಪ್ರಸ್ತಾಪ ಕಾನೂನು ಬಾಹಿರ: ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡುವ ಮುನ್ನವೇ ತಮ್ಮ ತಂದೆಯವರಾದ ಸಿದ್ದರಾಮಯ್ಯ ಅವರ ಹೆಸರನ್ನು ಅನವಶ್ಯಕವಾಗಿ ಪ್ರಸ್ತಾಪ ಮಾಡುವುದು ಕಾನೂನು ಬಾಹಿರ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ದೂರಿದ್ದಾರೆ.

ನಗರದಲ್ಲಿ ಇಂದು (ಜ.19) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ತನಿಖೆ ಕುರಿತು ಸಿಬಿಐಗೆ ವಹಿಸಬೇಕೆ ಬೇಡವೇ ಎಂಬ ವಿಚಾರ ಜ.26 ರಂದು ನ್ಯಾಯಾಲಯದ ಮುಂದೆ ಬರುತ್ತಿದೆ. ಇಂತಹ ಸಮಯದಲ್ಲಿ ಇಡಿ ಅಧಿಕಾರಿಗಳು ನ್ಯಾಯಾಲಯವನ್ನು ತಪ್ಪು ದಾರಿಗೆಳೆಯಲು ಉದ್ದೇಶಪೂರ್ವಕವಾಗಿ ಟ್ವೀಟ್‌ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದಿದ್ದಾರೆ ಎಂದು ಅಪ್ಪನ ಪರ ಬ್ಯಾಟ್‌ ಬೀಸಿದರು.

ಇಡಿ ಮುಟ್ಟುಗೋಲು ಹಾಕಿಕೊಂಡಿರುವ ನಿವೇಶನಗಳಲ್ಲಿ ತಾಯಿ ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳು ಸೇರಿಲ್ಲ. ಆದರೂ ಬಿಜೆಪಿ ಸಿದ್ದರಾಮಯ್ಯ ಅವರ ಹೆಸರನ್ನು ಹಾಳುಮಾಡಲು ಈ ರೀತಿಯ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

50:50 ಅನುಪಾತದಡಿ ನಿವೇಶನಗಳು ಹಂಚಿಕೆಯಾಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಅಂದಿನ ಸರ್ಕಾರದಲ್ಲಿ ಇದ್ದ ಸಚಿವರು ಹಾಗೂ ಆಗಿನ ಅಧಿಕಾರಿಗಳನ್ನು ಬೇಕಾದರೆ ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.

Tags:
error: Content is protected !!