Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಮಾನವನ ದುರಾಸೆಯಿಂದಲೇ ಅರಣ್ಯ ಸಂಪತ್ತು ನಾಶವಾಗುತ್ತಿದೆ: ಸಚಿವ ಈಶ್ವರ ಖಂಡ್ರೆ ಬೇಸರ

ಬೆಂಗಳೂರು: ಅರಣ್ಯ ಅಧಿಕಾರಿಗಳು ಜನರಿಗೆ ಕಾಡಿನ ಮಹತ್ವ ತಿಳಿಸಿ ಮತ್ತು ಹಸಿರು ಹೊದಿಕೆ ಹೆಚ್ಚಳ ಏಕೆ ಎಂಬ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಮಾಣಿಕವಾಗಿ ಸಸಿನೆಟ್ಟು ಬೆಳೆಸುವ ಇಚ್ಛಾಶಕ್ತಿ ಪ್ರದರ್ಶಿಸಿದರೆ ರಾಜ್ಯದ ಅರಣ್ಯ ವ್ಯಾಪ್ತಿ ಕೆಲವೇ ವರ್ಷಗಳಲ್ಲಿ ಶೇ.33ಕ್ಕೆ ತಲುಪುವುದರಲ್ಲಿ ಸಂದೇಹವಿಲ್ಲ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ, ಇಚ್ಛಾಶಕ್ತಿ ಇರಬೇಕು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕಾಡನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಿ, ಹೊಸ ಒತ್ತುವರಿಗೆ ಅವಕಾಶ ನೀಡದೆ, ಮಾನವೀಯ ನೆಲೆಗಟ್ಟಿನಲ್ಲಿ ಈಗಾಗಲೇ ಆಗಿರುವ ಒತ್ತುವರಿ ತೆರವು ಮಾಡಿಸಬೇಕು ಎಂದು ಸೂಚಿಸಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಪ್ರಕೃತಿ, ಪರಿಸರದ ಮೇಲಾಗುತ್ತಿದೆ. ಮಾಲಿನ್ಯ ಹೆಚ್ಚಳದಿಂದ ಕಡಿಯುವ ನೀರೂ ವಿಷವಾಗಿ ಜನರು ಅಸ್ವಸ್ಥರಾಗುತ್ತಿರುವುದನ್ನು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

1864ರ ಜನವರಿ 11ರಂದು ಅರಣ್ಯ ಸಂರಕ್ಷಣೆಗಾಗಿ ಮೈಸೂರು ಅರಣ್ಯ ಇಲಾಖೆ ಸ್ಥಾಪಿಸಲಾಯಿತು. 1700ರ ದಶಕದಲ್ಲಿ ಸೇನೆಯ ಬಳಕೆಗಾಗಿ ಇದ್ದ ಮದ್ರಾಸು-ಕಣ್ಣೂರು ರಸ್ತೆಯ ನಿರ್ವಹಣೆಗಾಗಿ ಅತ್ಯುತ್ತಮ ತೇಗದ ಮರಗಳು ಸೇರಿದಂತೆ ಅರಣ್ಯ ನಾಶವಾಯಿತು. ನಂತರ 1799ರ ಮೈಸೂರು ಯುದ್ಧದ ಬಳಿಕ ಶ್ರೀರಂಗಪಟ್ಟಣದ ಪತನವಾದ ಮೇಲೆ ಮೈಸೂರಿನ ಸ್ಥಳೀಯ ವೃಕ್ಷ ಸಂಪತ್ತಿನ ಮೇಲೆ ಪ್ರಭಾವ ಬೀರಿತು ಎಂದ ಇತಿಹಾಸದ ಘಟನೆಗಳನ್ನು ಸ್ಮರಿಸಿದರು.

Tags: