Mysore
24
broken clouds

Social Media

ಸೋಮವಾರ, 23 ಫೆಬ್ರವರಿ 2026
Light
Dark

ದೀಪಾವಳಿಗೆ ಬರ್ತಾನೆ ‘ಬಘೀರ’; ಅ. 17ಕ್ಕೆ ಮೊದಲ ಹಾಡು

ಡಿಸೆಂಬರ್‍ ಮೂರಕ್ಕೆ ಶ್ರೀಮುರಳಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳಾಗುತ್ತವೆ. 2021ರಲ್ಲಿ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರವು ಬಿಡುಗಡೆಯಾಗಿತ್ತು. ಅದಕ್ಕೂ ಮೊದಲೇ ‘ಬಘೀರ’ ಚಿತ್ರದ ಘೋಷಣೆಯಾಗಿದ್ದರೂ, ಕಾರಣಾಂತರಗಳಿಂದ ತಡವಾಗಿ, ಇದೀಗ ಕೊನೆಗೂ ಅಕ್ಟೋಬರ್‍ 31ರಂದು ದೀಪಾವಳಿ ಪ್ರಯುಕ್ತ ಬಿಡುಗಡೆ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.

ಹೊಂಬಾಳೆ ಫಿಲಂಸ್‍ ಸಂಸ್ಥೆಯಡಿ ವಿಜಯ್‍ ಕಿರಗಂದೂರು ನಿರ್ಮಿಸಿರುವ ‘ಬಘೀರ’ ಚಿತ್ರಕ್ಕೆ ‘ಕೆಜಿಎಫ್‌’ ಮತ್ತು ‘ಸಲಾರ್‌’ ಚಿತ್ರಗಳ ನಿರ್ದೇಶಕ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದಾರೆ ಎಂಬುದು ಇನ್ನೊಂದು ಬಲ. ಆಕ್ಷನ್‌ ಟೀಸರ್‌ ಮೂಲಕವೇ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಮೊದಲ ಹಾಡು ‘ರುಧೀರ ಧಾರಾ ಸಾಂಗ್‌’ ಅಕ್ಟೋಬರ್‌ 17ರ ಬೆಳಗ್ಗೆ 10:35ಕ್ಕೆ ಬಿಡುಗಡೆ ಆಗಲಿದೆ. ಈ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರದ ಕೆಲಸಗಳನ್ನು ಪ್ರಾರಂಭಿಸಲಿವೆ.

ಡಾಕ್ಟರ್‌ ಸೂರಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವ ‘ಬಘೀರ’ ಚಿತ್ರದಲ್ಲಿ ಪೊಲೀಸ್‌ ಅವತಾರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್‌ ರೈ, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್, ಅಶ್ವಿನ್ ಹಾಸನ್‍, ರಘೂ ರಾಮನಕೊಪ್ಪ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ.

‘ಬಘೀರ’ ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ, ಚೇತನ್‌ ಡಿಸೋಜಾ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ಅಂದಹಾಗೆ, ಹೊಂಬಾಳೆ ಫಿಲಂಸ್ ಸಂಸ್ಥೆಯು ಘೋಷಿಸಿ, ಪ್ರಾರಂಭಿಸಿದ ಹಲವು ಕನ್ನಡ ಚಿತ್ರಗಳಲ್ಲಿ ‘ಬಘೀರ’ ಕೊನೆಯ ಚಿತ್ರವಾಗಿದ್ದು, ಈ ಸಂಸ್ಥೆಯ ಮುಂದಿನ ಹೆಜ್ಜೆ ಏನು? ಮುಂದಿನ ದಿನಗಳಲ್ಲಿ ಯಾವೆಲ್ಲಾ ಚಿತ್ರಗಳನ್ನು ನಿರ್ಮಿಸುತ್ತದೆ? ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

Tags:
error: Content is protected !!