Mysore
30
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಜಂಬೂ ಸವಾರಿ ವೀಕ್ಷಣೆ ವೇಳೆ 6 ಮಂದಿ ಅಸ್ವಸ್ಥ

ನೂಕು ನುಗ್ಗಲಿಗೆ ಸಿಲುಕಿದ ಮಹಿಳೆಯರು, ಮಕ್ಕಳು; ತಕ್ಷಣವೇ ಅಸ್ವಸ್ಥರು ಆಸ್ಪತ್ರೆಗೆ ದಾಖಲು
ಎಸ್.ಪ್ರಶಾಂತ್
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ನಡೆದ ನೂಕು ನುಗ್ಗಲಿಗೆ ಸಿಲುಕಿ ಅರು ಮಂದಿ ಅಸ್ವಸ್ಥಗೊಂಡರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಂಬ್ಯುಲೆನ್ಸ್ ಚಾಲಕ ಹಾಗೂ ಸಿಬ್ಬಂದಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ನಂತರ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೋಯ್ದರು.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆ: ಕೆ.ಆರ್.ವೃತ್ತ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಮತ್ತು ಜಾಮರಾಜೇಂದ್ರ ವೃತ್ತ, ಚಿಕ್ಕಗಡಿಯಾರ ವೃತ್ತ, ನಗರ ಬಸ್ ನಿಲ್ದಾಣದ ಕಾಂಪೌಂಡ್ ಸುತ್ತಮುತ್ತ ನೂಕು ನುಗ್ಗಲಿನಲ್ಲಿ ಸಿಲುಕಿದ ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು ಮತ್ತು ಗೃಹರಕ್ಷಕ ದಳದವರು ರಕ್ಷಿಸಿ ಬ್ಯಾರಿಕೇಡ್‌ನ ಮುಂಭಾಗ ಕೂರಿಸಿ ಮೆರವಣಿಗೆ ವೀಕ್ಷಿಸಲು ಅನುವು ಮಾಡಿಕೊಟ್ಟರು.

ತಳ್ಳಾಡಿದವರಿಗೆ ಲಾಠಿ ರುಚಿ: ಕೆ.ಆರ್.ವೃತ್ತ, ಕೋಟೆ, ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ, ಚಿಕ್ಕ ಗಡಿಯಾರದ ಬಳಿ ನೂಕಾಟ ಕಂಡುಬಂತು. ಇದರಿಂದ ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಸಮಸ್ಯೆಗೆ ಸಿಲುಕಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಗುಂಪಿನಲ್ಲಿ ಅಲ್ಲಲ್ಲಿ ಸುಖಾ ಸುಮ್ಮನೆ ನೂಕುನುಗ್ಗಲು ಉಂಟು ಮಾಡಿ ಮಹಿಳೆಯರನ್ನು ಚುಡಾಯಿಸುತ್ತಿದ್ದ ಯುವಕರ ಗುಂಪಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಜನ ಜಂಗುಲಿ ನಿಯಂತ್ರಿಸಲು ಪೊಲೀಸರು ಆಗಾಗ ಲಾಠಿಯನ್ನು ಬೀಸಿ ಬೆದರಿಸುತ್ತಿದ್ದ ದೃಶ್ಯ ಕಂಡುಬಂದಿತು.

ತುರ್ತು ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗಬಾರದೆಂದು ಡಿಎಚ್‌ಒ ಅವರು ಮುನ್ನೆಚ್ಚರಿಕೆ ವಹಿಸಿದ್ದು, ಜಂಬೂಸವಾರಿ ನೋಡುವ ಸಂದರ್ಭದಲ್ಲಿ ಅಸ್ವಸ್ಥರಾದ 6 ಮಂದಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದೇವೆ.

-ವಿನೋದ್‌ ಕುಮಾರ್, ಆಂಬ್ಯುಲೆನ್ಸ್‌ ಚಾಲಕ

Tags:
error: Content is protected !!