Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಂವಹನ ಸೇತುವೆಗಳೂ ಭಾಷಾ ಸೂಕ್ಷ್ಮತೆಗಳೂ

ವಿಶಾಲ ಸಮಾಜದೊಡನೆ ಸಂವಾದಿಸುವಾಗ ಸಂವೇದನಾಶೀಲ ಭಾಷೆ ಬಳಸುವುದು ಅತ್ಯವಶ್ಯ

ನಾ.ದಿವಾಕರ

ನವ ಉದಾರವಾದ, ತಂತ್ರಜ್ಞಾನಾಧಾರಿತ ಸಂವಹನ ಕ್ರಾಂತಿ ಹಾಗೂ ಇಡೀ ಸಮಾಜದ ಮಾರುಕಟ್ಟೆ-ಕಾರ್ಪೊರೇಟೀಕರಣ ಈ ಮೂರು ಪ್ರಕ್ರಿಯೆಗಳು ಮಾನವ ಸಮಾಜವನ್ನು ಅದರ ಮೂಲ ಸೆಲೆಗಳಿಗೆ ಭಿನ್ನವಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವುದೇ ಅಲ್ಲದೆ ಈ ಮಾರುಕಟ್ಟೆಯ ಗ್ರಾಹಕ ಸಂಸ್ಕೃತಿ ಬಾಹ್ಯ ಸಮಾಜದ ಬೌದ್ಧಿಕ ನೆಲೆಗಳನ್ನೂ ಆಕ್ರಮಿಸಿರುವುದನ್ನು ಗಮನಿಸಬಹುದು. ಇಲ್ಲಿ ಸೃಷ್ಟಿಯಾಗುವ ಭಾಷೆ ಅಥವಾ ಪರಿಭಾಷೆ ಅನೇಕ ಸಂದರ್ಭಗಳಲ್ಲಿ ಉತ್ಪಾದಿತವಾಗಿರುತ್ತದೆ. ಈ ಉತ್ಪಾದಿತ ಪರಿಭಾಷೆಯನ್ನೇ ಜನಪ್ರಿಯಗೊಳಿಸುವ ಕೆಲಸವನ್ನು ಆಧುನಿಕ ಸಂವಹನ ತಂತ್ರಜ್ಞಾನಗಳನ್ನು ಬಳಸುವ ಮೂಲಕ ವಿದ್ಯುನ್ಮಾನ ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡುತ್ತವೆ. ಮಾಧ್ಯಮಗಳು ಬಳಸುವ ಈ ಪರಿಭಾಷೆಯೇ ಸಾರ್ವಜನಿಕ ವಲಯದ ಎಲ್ಲ ಸಾಂಕ ನೆಲೆಗಳಲ್ಲೂ ನೆಲೆ ಕಂಡುಕೊಳ್ಳುತ್ತದೆ. ಬಹುಮುಖ್ಯವಾಗಿ ಸಮಾಜದ ಎಲ್ಲ ವರ್ಗಗಳನ್ನೂ ಸುಲಭವಾಗಿ ತಲುಪುವಂತಹ 24×7 ಸುದ್ದಿಮನೆಗಳು, ಸಿನಿಮಾ ಮತ್ತು ಟಿವಿ ಧಾರಾವಾಹಿಗಳು ಇದನ್ನು ಬಳಸುವ ಮೂಲಕ ತಳಮಟ್ಟದ ಸಮಾಜವನ್ನು ತಲುಪಲು ನಿರಂತರ ಪ್ರಯತ್ನದಲ್ಲಿರುತ್ತವೆ.

ಕಂಪ್ಯೂಟರ್ ಯುಗ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುವ ಹಂತದಲ್ಲಿ, ಕಂಪ್ಯೂಟರ್‌ಗಳ ಬಳಕೆ ಮತ್ತು ನಿರ್ವಹಣೆಗಾಗಿ ಬಳಕೆಗೆ ಬಂದ ಯುದ್ಧ ಕೇಂದ್ರಿತ ಭಾಷಾ ಬಳಕೆ ಇಂದು ಸಾಮಾನ್ಯ ಸಂವಹನ ಸಾಧನವಾಗಿ ಕಾಣುತ್ತಿದೆ. ಸಂವಹನ ಕ್ರಾಂತಿಯ ಸಾಧನಗಳು ವ್ಯಾಪಕವಾಗಿ ಬಳಕೆಗೆ ಬರುತ್ತಿದ್ದಂತೆಲ್ಲಾ, ಈ ಸೇತುವೆಗಳನ್ನೂ ಇದೇ ಪದಗಳು ಆಕ್ರಮಿಸಿಕೊಂಡಿರುವುದನ್ನು ನಾವು ವಿದ್ಯುನ್ಮಾನ ಮಾಧ್ಯಮಗಳು ಬಳಸುವ ಭಾಷೆಯಲ್ಲಿ ಗಮನಿಸಬಹುದು. ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳನ್ನೇ ಗಮನಿಸಿದರೂ ಪ್ರತಿದಾಳಿ, ವಾಗ್ದಾಳಿ, ವಾಗ್ದಾಣ, ತಿರುಗೇಟು, ಒಳಟು ಮೊದಲಾದ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ರಾಜಕೀಯ ಮತ್ತು ಸಾರ್ವಜನಿಕ ಸಂವಾದದಲ್ಲಿ ಸಾಮಾನ್ಯವಾಗಿ ಕಾಣುವ ಪ್ರತಿಕ್ರಿಯೆಗಳೂ, ಚರ್ಚೆಗಳೂ ಇದೇ ಪರಿಭಾಷೆಯಲ್ಲೇ ವರದಿಯಾಗುವುದನ್ನು ಮುದ್ರಣ ಮಾಧ್ಯಮಗಳಲ್ಲೂ ಗಮನಿಸಬಹುದು.

ಈ ಬೆಳವಣಿಗೆಗಳ ಮತ್ತೊಂದು ಬದಿಯಲ್ಲಿ ನಾವು ಗಮನಿಸಬೇಕಿರುವುದು ಸಾಮಾಜಿಕ ಮಾಧ್ಯಮಗಳು (Social Media) ಹಾಗೂ ಇದನ್ನು ಆಕ್ರಮಿಸಿರುವ ಯುಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ ಆ್ಯಪ್ ಮತ್ತಿತರ ಡಿಜಿಟಲ್ ಪ್ಲಾಟ್‌ ಫಾರಂ ಅಥವಾ ಸಂವಹನ ಸೇತುವೆಗಳನ್ನು ತಳಮಟ್ಟದ ಸಮಾಜದಲ್ಲಿ ಮತ್ತು ಮಧ್ಯಮ ವರ್ಗಗಳನ್ನು ಪ್ರತಿನಿಧಿಸುವ ಸಮುದಾಯಗಳಲ್ಲಿ ಸಾಮಾಜಿಕ ಮಾಧ್ಯಮಗಳು ತಮ್ಮ ಅವಕಾಶಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್‌ ಫಾರಂಗಳ ಮೂಲಕ ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ನಾವು ಬಳಸುವ ಭಾಷೆ-ಪರಿಭಾಷೆಯ ಚೌಕಟ್ಟು ಹೇಗಿರಬೇಕು ಎನ್ನುವುದು ಬಹುಚರ್ಚಿತ ವಿಷಯವಾಗಿದೆ.

ಸಾಮಾಜಿಕ-ಸಾರ್ವಜನಿಕ ಪ್ರಜ್ಞೆ : ಇಲ್ಲಿ ನಮಗೆ ಸಾರ್ವಜನಿಕವಾಗಿ ಬಳಕೆಯ ಭಾಷೆ-ಪರಿಭಾಷೆ ಮುಖ್ಯವಾಗುತ್ತದೆ. ತಳಮಟ್ಟದ ಸಮಾಜ ಮಾತ್ರವೇ ಅಲ್ಲದೆ ನಗರೀಕರಣಕ್ಕೊಳಗಾದ, ಆಧುನಿಕ ಸುಶಿಕ್ಷಿತ ಹಿತವಲಯದಲ್ಲೂ ಈ ಭಾಷೆಯನ್ನು ಪ್ರಭಾವಿಸುವುದು ಶಿಷ್ಟ ಭಾಷೆ’ ಎಂದು ಕರೆಯಲಾಗುವ, ರೂಢಿಗತವಾದ ಸಾಹಿತ್ಯಕ ಅಥವಾ ಲಿಖಿತ ಭಾಷೆ ಮತ್ತು ಇದನ್ನೇ ಅನುಕರಿಸುವ ಸಿನಿಮಾ ಮತ್ತಿತರ ದೃಶ್ಯ ಮಾಧ್ಯಮಗಳ ಪರಿಭಾಷೆ ಇಲ್ಲಿ ಶಿಷ್ಟ ಎಂಬುದನ್ನು ಶ್ರೇಷ್ಠ ಅಥವಾ ಉತ್ಕೃಷ್ಟ ಎಂದು ಅರ್ಥೈಸುವ ಅಗತ್ಯವಿಲ್ಲ. ಅದಕ್ಕೆ ಪ್ರತಿವಾದಿಯಾಗಿ ಶಿಷ್ಟೇತರ ಅಥವಾ ಪರಿಶಿಷ್ಟ ಎಂದೂ ಅರ್ಥೈಸಬೇಕಿಲ್ಲ. ಆದರೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಸಂಭಾಷಿಸುವಾಗ ನಮ್ಮೊಳಗಿನ ನಾಗರಿಕ ಪ್ರಜ್ಞೆ (Civic Conscience) ಮತ್ತು ಸಾರ್ವಜನಿಕ ಪ್ರಜ್ಞೆ (Public Conscience) ಸದಾ ಜಾಗೃತವಾಗಿರಬೇಕಾದದ್ದು ಅತ್ಯವಶ್ಯ. ಏಕೆಂದರೆ ತಂತ್ರಜ್ಞಾನದ ಹರಿವು, ವಿಸ್ತರಣೆ ಮತ್ತು ಪ್ರಸರಣದ ವೇಗ ಒಂದು ಮಾತನ್ನು ಕ್ಷಣಗಳಲ್ಲಿ ಇಡೀ ವಿಶ್ವಕ್ಕೆ ತಲುಪಿಸುವ ಸಾಮರ್ಥ್ಯವನ್ನು ಕಲ್ಪಿಸಿದೆ. ಸಾಮಾಜಿಕ ಮಾಧ್ಯಮಗಳ ಎಲ್ಲ ಪ್ಲಾಟ್‌ ಫಾರಂಗಳೂ ಬಿತ್ತರಿಸುವ ಮಾತುಗಳು ಕ್ಷಣಮಾತ್ರದಲ್ಲಿ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ತಲುಪುವುದೇ ಅಲ್ಲದೆ, ಅಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ. ಈ ಪ್ರಭಾವಕ್ಕೊಳಪಡುವವರ ಪೈಕಿ ಸಮಾಜದ ಯುವ ಪೀಳಿಗೆಯೇ ಬಹುಸಂಖ್ಯಾತರಾಗಿರುವುದು ಸಹಜ. ಹಾಗಾಗಿ ಈ ತಾಣಗಳ ಮೂಲಕ ನಾವು ದಾಟಿಸಬೇಕಾದ ವಿಚಾರಗಳನ್ನು ಇಡೀ ಸಮಾಜಕ್ಕೆ ಒಪ್ಪಿಗೆಯಾಗುವ ಅಥವಾ ಸಮಾಜದ ಯಾವುದೇ ವಲಯದಲ್ಲೂ ಮುಜುಗರ ಉಂಟುಮಾಡದ ರೀತಿಯಲ್ಲಿ, ಪರಿಣಾಮಕಾರಿ ಭಾಷೆ-ಪರಿಭಾಷೆಯನ್ನು ಬಳಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅವಶ್ಯ.

ರಾಜಕಾರಣದ ಬೌದ್ಧಿಕ ಅವನತಿ: ಮೂರು ನಾಲ್ಕು ದಶಕಗಳ ಮುಂಚಿನ ರಾಜಕೀಯ ಸಂವಾದಗಳನ್ನು ಹಿಂತಿರುಗಿ ನೋಡಿದರೂ, ಪ್ರಸ್ತುತ ರಾಜಕೀಯ ಚರ್ಚೆಗಳು ಹೇಸಿಗೆ ಹುಟ್ಟಿಸುವಂತಿರುವುದನ್ನು ಈ ದೃಷ್ಟಿಯಿಂದಲೇ ಗಮನಿಸಬೇಕಿದೆ. ಇದು ಬೌದ್ಧಿಕವಾಗಿ ರಾಜಕೀಯ ಅವನತಿಯ ಸೂಚನೆಯಾಗಿದ್ದರೂ ತಮ್ಮ ಅಧಿಕಾರದಾಹವನ್ನು ತಣಿಸಲು ಅತ್ಯಂತ ಕೆಳಮಟ್ಟದ ಭಾಷೆಯನ್ನೂ ಬಳಸಲು ಹೇಸದ ರಾಜಕೀಯ ನಾಯಕರನ್ನು ಹೊರಗಿಟ್ಟು ನೋಡಿದಾಗ, ನಮಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆಯನ್ನು ಆರೋಗ್ಯಕರ ಮಾದರಿಯಲ್ಲಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಾಮಾಜಿಕ ಸಂಘಟನೆಗಳು, ಹೋರಾಟಗಳು ಮುಖ್ಯ ಸೇತುವೆಗಳಾಗಿ ಕಾಣುತ್ತವೆ. ಈ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಪ್ರತಿಯೊಂದು ಮನಸ್ಸ ಸಮಾಜದ ಭೌತಿಕ- ಬೌದ್ಧಿಕ ಹಾಗೂ ಸಾಂಸ್ಕೃತಿಕ ಆರೋಗ್ಯವನ್ನು ರಕ್ಷಿಸುವುದಷ್ಟೇ ಹೊತ್ತಿರಬೇಕು. ಈ ಸಾಮಾಜಿಕ ಪ್ರಜ್ಞೆ ಬಹುತೇಕ ಎಲ್ಲರಲ್ಲೂ ಇರಬೇಕಾಗುತ್ತದೆ. ಹಾಗಾಗಿ ಅವನತಿಯತ್ತ ಸಾಗುತ್ತಿರುವ ರಾಜಕೀಯ ಪರಿಭಾಷೆಗೆ ಪ್ರತಿಯಾಗಿ ನಮ್ಮ ವಾದಗಳನ್ನು, ಹೇಳಿಕೆಗಳನ್ನು ಮಂಡಿಸುವಾಗ, ಈ ಪ್ರಜ್ಞೆ ನಮ್ಮನ್ನು ಸದಾ ಎಚ್ಚರಿಸುತ್ತಿರಬೇಕು.

ಇಂತಹ ಸಂದರ್ಭಗಳಲ್ಲಿ ಯುವ ತಲೆಮಾರು ಕ್ಷಣಿಕ ಭಾವಾವೇಷಕ್ಕೆ ಒಳಗಾಗುವುದು ಸಹಜ. ಆದರೆ ಬೌದ್ಧಿಕವಾಗಿ ಔನ್ನತ್ಯದ ಹಾದಿಯಲ್ಲಿ ಸಾಗುತ್ತಿರುವ ಒಂದು ಸಮಾಜದಲ್ಲಿ ಇಂತಹ ವಿದ್ಯಮಾನಗಳು ಯುವ ತಲೆಮಾರನ್ನು ಹಾದಿ ತಪ್ಪಿಸುತ್ತವೆ. ‘An Eye for an Eye makes the whole world blind’ ಎಂಬ ಮಹಾತ್ಮ ಗಾಂಧಿಯ ಹಿತವಚನವನ್ನು ಇಲ್ಲಿ ಉಲ್ಲೇಖಿಸಬಹುದು. ಹೇಗೆ ಹಿಂಸೆಗೆ ಪ್ರತಿಹಿಂಸೆ ಸಮಾಜದ ಭೌತಿಕ ಸ್ವಾಸ್ಥ್ಯವನ್ನು ಸರ್ವನಾಶ ಮಾಡುವುದೋ ಹಾಗೆಯೇ ಸಂವಹನದ ನೆಲೆಯಲ್ಲಿ ಹಿಂಸಾತ್ಮಕ-ಕ್ರೂರ- ಅಸಭ್ಯ-ಸೌಜನ್ಯರಹಿತ ಮಾತು-ಪ್ರತಿಮಾತುಗಳೂ ಇಡೀ ಸಮಾಜದ ಬೌದ್ಧಿಕ ಸ್ವಾಸ್ಥ್ಯವನ್ನು ನಾಶಪಡಿಸುತ್ತವೆ. ಸಾರ್ವಜನಿಕ ಬದುಕಿನ ಮೇಲೆ ಅತಿಯಾದ ಪ್ರಭಾವ ಬೀರುವ ಸಿನಿಮಾ ಮತ್ತು ಡಿಜಿಟಲ್ ಯುಗದ ತಂತ್ರಜ್ಞಾನಾಧಾರಿತ ಪ್ಲಾಟ್ ಫಾರಂಗಳಲ್ಲಿ ಈ ಮೌಲಿಕ ನೆಲೆಗಳನ್ನು ಮರುಸ್ಥಾಪಿಸಬೇಕಿದೆ. ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳೂ ಮುಖ್ಯವಾಹಿನಿ ಸುದ್ದಿಮಾಧ್ಯಮಗಳ ಹಾದಿಯಲ್ಲೇ ಕ್ರಮಿಸುತ್ತಿದ್ದು, ತಮ್ಮ ಭಾಷಾ ಬಳಕೆಯ ಮೇಲೆ ನಿಗ್ರಹ ಕಳೆದುಕೊಳ್ಳುತ್ತಿವೆ.

ಈ ಎಚ್ಚರ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್‌ಫಾರಂಗಳನ್ನು ಬಳಸುವ ಪ್ರತಿ ವ್ಯಕ್ತಿಯಲ್ಲೂ ಇರಬೇಕು. ವಿಶೇಷವಾಗಿ ಸಾಮಾಜಿಕ ಚಳವಳಿಗಳಲ್ಲಿ, ಪ್ರಗತಿಪರ ಎನಿಸಿಕೊಳ್ಳುವ ಉನ್ನತಾದರ್ಶಗಳ ಹೋರಾಟ ಗಳಲ್ಲಿ ತೊಡಗಿರುವ ಮತ್ತು ಸಾಹಿತ್ಯಕವಾಗಿ ಸಮಾಜವನ್ನು ತಲುಪಲಿಚ್ಛಿಸುವ ಪ್ರತಿ ವ್ಯಕ್ತಿಯಲ್ಲೂ ಭಾಷಾ ಬಳಕೆಯ ಸೌಜನ್ಯ, ಸಭ್ಯತೆಯ ಅರಿವು ಇರಬೇಕು. ಈ ಗುಣಲಕ್ಷಣಗಳು ಯಾವುದೇ ಒಂದು ಜಾತಿ, ಮತ ಅಥವಾ ಸಮುದಾಯದ ಸ್ವತ್ತಲ್ಲ ಅಥವಾ ಇವುಗಳ ಮೇಲೆ ಯಾವ ಸಮಾಜವೂ ಪೇಟೆಂಟ್ ಸಾಧಿಸಲಾಗುವುದಿಲ್ಲ. ಇದು ಸಹಜ ಬದುಕಿನಲ್ಲಿ ಸಮಾಜವನ್ನು ನಿರ್ದೇಶಿಸುವ ಸಂವಹನದ ಸೇತುವೆಗಳಲ್ಲಿ ಸ್ವಾಭಾವಿಕವಾಗಿ ನೆಲೆಗಾಣ ಬೇಕಾದ ಮೌಲಿಕ ಲಕ್ಷಣಗಳು. ಇದನ್ನು ದಾಟಿ ಹೋದಾಗ ನಾವು ದಾಟಿಸುವ ಮಾತುಗಳು ಅಕ್ಷರ ರೂಪದಲ್ಲಿ ಯಥಾವತ್ತಾಗಿ ತಲುಪಬಹುದಾದರೂ, ಎದೆಗೆ ತಲುಪುವ ಹಾದಿಯಲ್ಲಿ ಭ್ರಷ್ಟವಾಗಿಬಿಡುತ್ತದೆ.

ಯುವ ತಲೆಮಾರು ಸಾಮಾನ್ಯವಾಗಿ, ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿತವಾಗುವ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್ ಫಾರಂಗಳನ್ನು ಬಳಸುವ ಪ್ರತಿ ವ್ಯಕ್ತಿಯಲ್ಲೂ ಈ ನೈತಿಕ ಎಚ್ಚರಿಕೆ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಕಾಲೀನ ಭಾರತದಲ್ಲಿ ರಾಜಕೀಯವಾಗಿ ಅತಿಹೆಚ್ಚು ಪ್ರಭಾವಿಸಿರುವ ಇಬ್ಬರು ಮೇರು ದಾರ್ಶನಿಕರು ನಮಗೆ ಮಾರ್ಗದರ್ಶಕರಾಗಿ ಕಾಣುತ್ತಾರೆ. ಅದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ. ಈ ಇಬ್ಬರೂ ನಾಯಕರ ನಡುವೆ ನಡೆದ ಸಂಭಾಷಣೆ, ಸಂವಾದ, ವಾದಸರಣಿಗಳನ್ನು ಅಧ್ಯಯನ ಮಾಡುವ ಯಾರಿಗೇ ಆದರೂ ಈ ಉನ್ನತಾದರ್ಶದ ದರ್ಶನವಾಗುತ್ತದೆ. ಇದನ್ನು ಅರಗಿಸಿಕೊಳ್ಳುವ ಮೂಲಕ, ಇಂತಹ ಚಿಂತನಾಧಾರೆಗಳನ್ನು ಮೌಲಿಕವಾಗಿ ಒಳಗಿಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಮೂರು ನಾಲ್ಕು ದಶಕಗಳ ಮುಂಚಿನ ರಾಜಕೀಯ ಸಂವಾದಗಳನ್ನು ಹಿಂತಿರುಗಿ ನೋಡಿದರೂ, ಪ್ರಸ್ತುತ ರಾಜಕೀಯ ಚರ್ಚೆಗಳು ಹೇಸಿಗೆ ಹುಟ್ಟಿಸುವಂತಿರುವುದನ್ನು ಈ ದೃಷ್ಟಿಯಿಂದಲೇ ಗಮನಿಸಬೇಕಿದೆ. ಇದು ಬೌದ್ಧಿಕವಾಗಿ ರಾಜಕೀಯ ಅವನತಿಯ ಸೂಚನೆಯಾಗಿದ್ದರೂ ತಮ್ಮ ಅಧಿಕಾರದಾಹವನ್ನು ತಣಿಸಲು ಅತ್ಯಂತ ಕೆಳಮಟ್ಟದ ಭಾಷೆಯನ್ನೂ ಬಳಸಲು ಹೇಸದ ರಾಜಕೀಯ ನಾಯಕರನ್ನು ಹೊರಗಿಟ್ಟು ನೋಡಿದಾಗ, ನಮಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆಯನ್ನು ಆರೋಗ್ಯಕರ ಮಾದರಿಯಲ್ಲಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಾಮಾಜಿಕ ಸಂಘಟನೆಗಳು, ಹೋರಾಟಗಳು ಮುಖ್ಯ ಸೇತುವೆಗಳಾಗಿ ಕಾಣುತ್ತವೆ. ಈ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಪ್ರತಿಯೊಂದು ಮನಸ್ಸ ಸಮಾಜದ ಭೌತಿಕ-ಬೌದ್ಧಿಕ ಹಾಗೂ ಸಾಂಸ್ಕೃತಿಕ ಆರೋಗ್ಯವನ್ನು ರಕ್ಷಿಸುವುದಷ್ಟೇ ಅಲ್ಲದೆ, ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ ಅಥವಾ ಹೊತ್ತಿರಬೇಕು.

 

 

Tags: