ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದ್ದು, ದರ್ಶನ್ ಪರ ವಕೀಲರು ಬಲವಾದ ವಾದ ಮಂಡಿಸಿ ಪೊಲೀಸರು ವೈಫಲ್ಯಗಳನ್ನು ತೋರಿಸಿದ್ದಾರೆ. ಹೀಗಾಗಿ, ಎಸ್ಪಿಪಿ ಪ್ರಸನ್ನಕುಮಾರ್ ಪ್ರತಿವಾದಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ(ಅ.9) 57ನೇ ಸಿಸಿಎಚ್ ನ್ಯಾಯಾಲಯ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಮುಗಿಸಿದ ನಂತರ ಆರೋಪಿ ಎ2 ದರ್ಶನ್ ಹಾಗೂ ಎ1 ಪವಿತ್ರಾ ಅವರ ವಕೀಲರು ಪ್ರಕರಣದ ತನಿಖೆಗೆ ಬಗ್ಗೆ ಕೇಳಿದ ಕೆಲವು ಪ್ರಶ್ನೆಗಳಿಗೆ ಎಸ್ಪಿಪಿ ಅವರು ಉತ್ತರ ನೀಡಲು ಪ್ರಾರಂಭಿಸಿದರು.
ಎಸ್ಪಿಪಿ ಅವರ ಸುದೀರ್ಘ ವಾದ ಮಂಡನೆಯ ಸಂದರ್ಭದಲ್ಲಿ ನ್ಯಾಯಾಲಯದ ಸಮಯ ಮೀರಿದ ಕಾರಣ ಹಾಗೂ ಆರೋಪಿಗಳ ಪರ ವಕೀಲರು ಕೇಳಿರುವ ಇನ್ನುಳಿದ ಪ್ರಶ್ನೆಗಳಿಗೆ ಉತ್ತರಿಸಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ ಎಸ್ಪಿಪಿ ಪ್ರಸನ್ನಕುಮಾರ್ ಅವರ ಮನವಿಯ ಮೇರೆಗೆ ನಾಳೆ(ಅ.9) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.