ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ. ಈ ನಡುವೆ, ಇತ್ತ ಜೆಡಿಎಸ್ ಶಾಸಕ ಜಿಟಿ ದೇವೆಗೌಡ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆ ಮೇಲೆಯೇ ಸಿಎಂ ಪರ ಬ್ಯಾಟಿಂಗ್ ಮಾಡಿದ್ದು, ʼಸಿಎಂ ರಾಜೀನಾಮೆʼ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸದ್ಯ, ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಈ ಬಗ್ಗೆ ರಾಜ್ಯ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು, ಹಲವರ ಪ್ರತಿಕ್ರಿಯೆ ಇಲ್ಲಿದೆ…
ಸಿದ್ದು ಪರ ಜಿಟಿಡಿ: ಕಾರಣ ಬಿಚ್ಚಿಟ್ಟ ಎಚ್ಡಿಕೆ
ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಜಿ.ಡಿ.ದೇವೇಗೌಡ ಅವರು ಮೈಸೂರಿನ ಶಾಸಕರಾಗಿದ್ದಾರೆ. ತಾನು ತೊಂದರೆಗೆ ಸಿಲುಕಿಕೊಳ್ಳಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿರಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಜಿಟಿಡಿ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಸರಾ ಉದ್ಘಾಟನಾ ವೇದಿಕೆಯೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಾಗಬೇಕೆ ಹೊರತು, ರಾಜಕೀಯ ವಿಚಾರಗಳ ಪ್ರಸ್ತಾಪ ಆಗಬಾರದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ತಪ್ಪು ಮಾಡಿಲ್ಲ ಎಂದು ಹೇಳುತ್ತಾರೆ. ಏನು ತಪ್ಪು ಮಾಡಿಲ್ಲ ಎನ್ನುವುದೇ ಆದರೆ ದಸರಾ ವೇದಿಕೆಯಲ್ಲಿ ರಾಜಕೀಯ ಯಾಕೆ ಮಾತನಾಡಬೇಕು. ಅದೇನು ರಾಜಕೀಯ ವೇದಿಕೆನಾ ಎಂದು ಪ್ರಶ್ನಿಸಿದ್ದಾರೆ. ಸಾಂಸ್ಕೃತಿಕ ವೇದಿಕೆಯೂ ರಾಜಕಾರಿಣಿಗಳ ತೆವಲು ತೀರಿಸಿಕೊಳ್ಳುವಂತಹ ವೇದಿಕೆ ಆಗಬಾರದು. ಆದರೆ ರಾಜಕೀಯ ಬಳಕೆ ಆಗಿರೋದು ತಪ್ಪು. ಅದು ಶಾಸಕ ಜಿ.ಟಿ.ದೇವೇಗೌಡ ಆಗಿರಬಹುದು ಅಥವಾ ಇನ್ನೊಬ್ಬರ ಆಗಿರಲಿ. ಇದು ನಾಚಿಕೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಜಿಟಿಡಿಗೆ ಧನ್ಯವಾದ ಹೇಳಿದ ಜಮೀರ್…
ಸಚಿವ ಜಮ್ಮೀರ್ ಅಹ್ಮದ್ ಮಾತನಾಡಿ, ಜಿ.ಡಿ.ದೇವೇಗೌಡ ಅವರಿಗೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ತಪ್ಪೇನಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಜಿಟಿಡಿ ಸತ್ಯ ಹೇಳಿದ್ದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಜಿಟಿಡಿ ಹೇಳಿರುವುದು ಸರಿಯಿದೆ; ಸಚಿವ ದಿನೇಶ್ ಗುಂಡೂರಾವ್
ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ನೈತಿಕತೆಯಾಗಲೀ, ಸೈದ್ಧಾಂತಿಕ ನಿಲುವುಗಳಾಗಲೀ ಇಲ್ಲ. ಕೇವಲ ಅಧಿಕಾರವಷ್ಟೇ ಬೇಕು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆ ತರುವುದು ಕುಮಾರಸ್ವಾಮಿಯವರ ಮೂಲ ಉದ್ದೇಶ. ಎಫ್ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕೇ? ಎಂದು ಜಿ.ಟಿ.ದೇವೇಗೌಡ ಹೇಳಿರುವುದು ಸರಿಯಿದೆ ಎಂದು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡರು.
ಹಾಸನದಲ್ಲಿ ಜೆಡಿಎಸ್ ಶಾಸಕ ಎ.ಮಂಜು ಮಾತನಾಡಿ, ಜಿ.ಡಿ.ದೇವೇಗೌಡ ಅವರು ಏನು ಮಾತಾಡಿದ್ದಾರೆ, ಉದ್ದೇಶ ಏನು ನಮಗೆ ಗೊತ್ತಿಲ್ಲ. ಮಾಧ್ಯಮ ಸುದ್ದಿ ನೋಡಿದಾಗಲೇ ವಿಚಾರ ತಿಳಿದಿದ್ದು ಎಂದಿದ್ದಾರೆ.