ಹುಬ್ಬಳ್ಳಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಒಂದು ತಪ್ಪು ಮಾಡಲು ಹೋಗಿ 50 ತಪ್ಪು ಮಾಡಿ, ರಾಜೀನಾಮೆ ಕೊಡೋದು ಬಿಟ್ಟು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಬ್ಬ ಮಾದರಿ ರಾಜಕಾರಿಣಿಯಾಗಿದ್ದಾರೆ. ಆಗಿದ್ದರೂ ಅವರಿಂದ ತಪ್ಪು ಆಗಿದೆ. ಅಲ್ಲದೇ ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮುಡಾ ನಿವೇಶನಗಳನ್ನು ವಿಧಾನಸಭೆ ಅಧಿವೇಶನ ನಡೆಯುವಾಗಲೇ ವಾಪಾಸ್ ನೀಡಿದ್ದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಇದೀಗ ಮೈಸೂರು ಲೋಕಾಯುಕ್ತ ಹಾಗೂ ಇ.ಡಿ ದೂರು ದಾಖಲಿಸಿ ತನಿಖೆ ನಡೆಸುತ್ತಿರುವ ವೇಳೆ ಸೈಟ್ ವಾಪಸ್ ನೀಡಿರುವುದು ಸರಿಯಲ್ಲ. ಹೀಗಾಗಿ ಅವರ ಮುಂದಿರೋದು ರಾಜೀನಾಮೆಯೊಂದೇ ದಾರಿ ಎಂದರು.
ಸಿದ್ದರಾಮಯ್ಯ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದ್ದರೆ, ಅವರ ಇತಿಹಾಸವನ್ನು ತಿಳಿಯಬೇಕಿದ್ದರೆ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ತನಿಖೆಯ ನಂತರ ಆರೋಪ ಮುಕ್ತವಾದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಮುಂದುವರೆಯಲಿ. ಪಕ್ಷ ಅವರ ಮೇಲೆ ಗೌರವ ಇಟ್ಟಿದ್ದರೆ ಮುಖ್ಯಮಂತ್ರಿ ಮಾಡಲಿ. ನಾವೇ ಆಗ ಅಭಿನಂದನೆ ತಿಳಿಸುತ್ತೇವೆ ಎಂದರು.