Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮ.ಬೆಟ್ಟ: ಹುಂಡಿ ಹಣ ದುಂದುವೆಚ್ಚ ಮಾಡಬೇಡಿ: ಶಾಸಕ ಮಂಜುನಾಥ್

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹವರು ಬಡವರು ಹಾಕುವ ಹುಂಡಿ ಹಣ ಹಾಗೂ ಇತರ ಸೇವೆಗಳಿಂದ ಬರುವ ಹಣವನ್ನು ದುಂದುವೆಚ್ಚ ಮಾಡದೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಿ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಮಹಾಲಯ ಅಮಾವಾಸ್ಯೆ , ನವರಾತ್ರಿ ಉತ್ಸವ, ಆಯುಧಪೂಜೆ, ವಿಜಯದಶಮಿ ದೀಪಾವಳಿ ಜಾತ್ರಾ ಮಹೋತ್ಸವ, ಕಾರ್ತಿಕ ಮಾಸ ಜಾತ್ರೆಗಳು, ಸಾಲು ಸಾಲಾಗಿ ಬರುವುದರಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರಿಗೆ ಸಕಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು, ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಲಗೇಜ್ ಕೌಂಟರ್, ವಾಸ್ತವಕ್ಕೆ ರಂಗ ಮಂದಿರ ಹಾಗೂ ರಾಜಗೋಪುರ ಮುಂಭಾಗ ಗುಣಮಟ್ಟದ ಶಾಮಿಯಾನ ಅಳವಡಿಕೆ, ನಿರಂತರ ಗುಣಮಟ್ಟದ ದಾಸೋಹ ವ್ಯವಸ್ಥೆ ಕಲ್ಪಿಸಬೇಕು. ಹಿರಿಯ ನಾಗರಿಕರು , ವಿಶೇಷಚೇತನರಿಗೆ ಪ್ರತ್ಯೇಕ ಕ್ಯೂ ಲೈನ್ ಮಾಡುವ ಮೂಲಕ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಪ್ರಮುಖವಾಗಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದರು.

ಪ್ರತಿನಿತ್ಯ ದಾಸೋಹ ಭವನದಲ್ಲಿ ವಿವಿಧ ಬಗೆಯ ತಿಂಡಿ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ಪ್ರಸಾದ ತಯಾರು ಮಾಡಿ ಭಕ್ತಾದಿಗಳಿಗೆ ವಿತರಿಸಬೇಕು. ಧರ್ಮದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ನೂಕು ನುಗ್ಗಲು ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ದುಂದು ವೆಚ್ಚ ಮಾಡಬೇಡಿ: ಶ್ರೀ ಕ್ಷೇತ್ರ ಮಲೆ ಮಹದೇಶ್ವರರಿಗೆ ಹೆಚ್ಚಾಗಿ ಬಡ ಭಕ್ತಾದಿಗಳೇ ಆಗಮಿಸಿ ತಮ್ಮ ಹರಕೆ ಕಾಣಿಕೆ ಸಲ್ಲಿಸಿ ಸೇವೆ ಮಾಡುತ್ತಿದ್ದಾರೆ ಇಂತಹ ಹಣವನ್ನು ದುಂದು ವೆಚ್ಚ ಮಾಡದೆ ಭಕ್ತರ ಹಣವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಪ್ರಕರಣಗಳು ದಾಖಲಾಗಿದೆ .ಆದರೆ ಶ್ರೀ ಕ್ಷೇತ್ರದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧ ಮಾಡಲು ಅಧಿಕಾರಿಗಳು ಸಿಬ್ಬಂದಿಗಳನ್ನು ನೇಮಕ ಮಾಡಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮಾತನಾಡಿ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಭಕ್ತಾದಿಗಳಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ, ಅಂತರಗಂಗೆ ಸ್ಥಾನಘಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಭಕ್ತಾದಿಗಳಿಗೂ ಅರಿವು ಮೂಡಿಸಲು ನಾಮಫಲಕ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇದಲ್ಲದೆ ದೇವಸ್ಥಾನದ ಆವರಣ, ಭಕ್ತಾದಿಗಳು ಪ್ರತ್ಯೇಕವಾಗಿ ಪರ ಮಾಡುವ ಜಾಗದಲ್ಲಿ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಪ್ರಾಧಿಕಾರದ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ದಾಸೋಹ ಭವನದಲ್ಲಿ ಗುಣಮಟ್ಟದ ಪ್ರಸಾದ ನೀಡಿ ಭಕ್ತರ ಸುರಕ್ಷತೆಯ ಬಗ್ಗೆ ಗಮನ ಹರಿಸಲು ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಮಗಾರಿಗಳ ಪರಿಶೀಲನೆ: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ತಳಭಾಗದಲ್ಲಿ ನಿರ್ಮಾಣವಾಗುತ್ತಿರುವ ಮಹದೇಶ್ವರರ ಶಿವಲೀಲೆ, ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಇನ್ಸ್ಪೆಕ್ಟರ್ ಜಗದೀಶ್, ಎಇಇ ಚಿನ್ನಣ್ಣ, ಸೆಸ್ಕಾಂ ಎಇ ಮಹೇಶ್, ದ್ವಿತೀಯ ದರ್ಜೆ ಸಹಾಯಕರುಗಳಾದ ಸರಗೂರು ಮಹಾದೇವಸ್ವಾಮಿ, ಜನಾರ್ಧನ್ ,ನಾಗರಾಜು, ಮಹದೇವಸ್ವಾಮಿ, ದಾಸೋಹ ಭವನದ ಉಸ್ತುವಾರಿ ಶಾಗ್ಯ ಸ್ವಾಮಿ, ಪಾರು ಪತ್ತೆದಾರ ಮಹಾಲಿಂಗನ ಕಟ್ಟೆ ಮಹಾದೇವಸ್ವಾಮಿ, ಮಲ್ಲಿಕಾರ್ಜುನ್, ಮಹೇಶ್, ಪ್ರಾಧಿಕಾರದ ಅಭಿಯಂತರ ಸೆಲ್ವ ಗಣಪತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಾನವಿ, ಸೇರಿದಂತೆ ಇನ್ನಿತರ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Tags: