ಬೆಂಗಳೂರು: ರಾಜ್ಯಪಾಲರು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಅನಿವಾರ್ಯತೆ ಇಲ್ಲ. ಯಾವುದಕ್ಕೆ ಉತ್ತರಿಸಬೇಕು ಅದಕ್ಕೆ ಖಂಡಿತವಾಗಿಯೇ ಉತ್ತರ ನೀಡುತ್ತೇವೆ. ಅದನ್ನು ಬಿಟ್ಟು ಎಲ್ಲದಕ್ಕೂ ಉತ್ತರಿಸಬೇಕು ಅಂತೇನೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಏಕಾಏಕಿಯಾಗಿ ಸಿಎಂಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ಖಂಡಿಸಿ, ಅದು ತಪ್ಪು ಅಂತ ಹೇಳಿ ಅಷ್ಟೇ ಪ್ರತಿಭಟನೆ ನಡೆಸಿದ್ದೇವೆ. ಅದನ್ನು ಹೊರತುಪಡಿಸಿ ಸುಮ್ಮನೆ ಪ್ರತಿಭಟನೆ ನಡೆಸಿಲ್ಲ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ವರದಿಯೂ ಇಲ್ಲ ಮತ್ತು ತನಿಖೆಯೂ ಆಗಿಲ್ಲ. ಹೀಗಿರುವಾಗ ಯಾರೋ ಬಂದು ದೂರು ನೀಡಿದರು ಎಂದಾಕ್ಷಣ ಪರಿಶೀಲನೆ ನಡೆಸದೇ ಶೋಕಾಸ್ ನೀಡಿರುವುದು ಸರಿಯಲ್ಲ. ರಾಜ್ಯಪಾಲರು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯಪಾಲರು, ನಮ್ಮ ಸರ್ಕಾರದ ಪ್ರತಿನಿತ್ಯದ ಆಡಳಿತಕ್ಕೆ ಕುರಿತಂತೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದಾಗಲಿ ಎಲ್ಲಿಯೂ ಕೇಳಿಲ್ಲ. ಇಂಗ್ಲೀಷ್ನಲ್ಲಿ ಸಹಿ ಹಾಕಿದರೂ ಪತ್ರದ ಮೂಲಕ ಮಾಹಿತಿ ಕೇಳುತ್ತಾರೆ. ಬಹುಶಃ ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಹೋಲಿಕೆ ಮಾಡಿ ನೋಡಿದರೆ, ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಮಾತ್ರ ರಾಜ್ಯಪಾಲರು ಸರ್ಕಾರದ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.