Mysore
19
overcast clouds
Light
Dark

ಕೊಡಗಿನಲ್ಲಿ ಕೋಮು ಸೌಹಾರ್ದತೆ ಸಾರಿದ ಹಬ್ಬದಾಚರಣೆ

ಮಡಿಕೇರಿ: ಹಲವಾರು ಕೋಮು ಸಂಘರ್ಷದಿಂದ ಸೂಕ್ಷ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹಬ್ಬದಾಚರಣೆ ಶಾಂತಿಯುತ ಹಾಗೂ ಸೌಹಾರ್ದತೆಯಿಂದ ನಡೆದಿದೆ.

ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಾರಿ ಪರಸ್ಪರ ಸೌಹಾರ್ದತೆಯಿಂದ ಹಬ್ಬದಾಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗಣೇಶೋತ್ಸವಕ್ಕೂ ಮುನ್ನವೇ ಪೊಲೀಸ್ ಇಲಾಖೆಯಿಂದ ಧಾರ್ಮಿಕ ಮುಖಂಡರ ಸಭೆ ನಡೆಸಿ ಶಾಂತಿಯುತವಾಗಿ ಹಬ್ಬದಾಚರಣೆ ಮಾಡಲು ಕರೆ ನೀಡಲಾಗಿತ್ತು. ಈದ್ ಮಿಲಾದ್‌ಗೂ ಮುನ್ನ ಪೊಲೀಸ್ ಇಲಾಖೆ ಸಭೆಗಳನ್ನು ಆಯೋಜಿಸುವ ಮೂಲಕ ಸೌಹಾರ್ದತೆ ಯಿಂದ ಹಬ್ಬದಾಚರಣೆಗೆ ಮನವಿ ಮಾಡಲಾಗಿತ್ತು.

ಎರಡೂ ಧರ್ಮಗಳ ಮುಖಂಡರೂ ಶಾಂತಿಯುತ ಹಬ್ಬಗಳ ಆಚರಣೆಗೆ ಸಹಕಾರ ನೀಡುವ ಭರವಸೆ ನೀಡಿದ್ದರು. ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಜಿಲ್ಲೆಯ ಹಲೆವೆಡೆ ಹಿಂದೂ ಸಹೋದರರಿಗೆ ಸಿಹಿ, ಪಾನೀಯ ವ್ಯವಸ್ಥೆ ಮಾಡಿದ್ದರು. ಅದಕ್ಕೆ ಬದಲಾಗಿ ಮುಸ್ಲಿಂ ಸಮುದಾಯದವರ ಈದ್ ಮಿಲಾದ್ ಆಚರಣೆ ಸಂದರ್ಭ ದಲ್ಲಿಯೂ ಹಿಂದೂ ಬಾಂಧವರು ಸಿಹಿ ಹಾಗೂ ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಜಿಲ್ಲೆಯ ಬೋಯಿಕೇರಿ, ೭ನೇ ಹೊಸಕೋಟೆ, ಸುಂಟಿಕೊಪ್ಪ, ಕುಶಾಲ ನಗರದಲ್ಲಿ ಸೌಹಾರ್ದ ಯುತವಾಗಿ ಹಬ್ಬವನ್ನು ಆಚರಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಸೌಹಾರ್ದಯುತ ಹಬ್ಬ ಆಚರಣೆ ಮಾಡಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಸಾಕಷ್ಟು ಬಾರಿ ಸಂಘರ್ಷಗಳಿಂದ ಹೆಚ್ಚಿನ ಸುದ್ದಿಯಾಗುತ್ತಿದ್ದ ಜಿಲ್ಲೆಯಲ್ಲಿ ಈ ಬಾರಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ನಡೆದ ಹಬ್ಬದಾಚರಣೆ ಹೆಚ್ಚು ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಧರ್ಮದವರೂ ಪಾನೀಯ ಹಂಚುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹೊರ ಜಿಲ್ಲೆಗಳಲ್ಲಿ ಹಬ್ಬದಾಚರಣೆ ಸಂದರ್ಭದಲ್ಲಿ ಶಾಂತಿ ಕದಡುತ್ತಿರುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಸದ್ದಿಲ್ಲದೆ ಶಾಂತಿಯುತವಾಗಿ ಪರಸ್ಪರ ಸೌಹಾರ್ದ ತೆಯಿಂದ ಹಬ್ಬ ಆಚರಣೆ ನಡೆದಿ ರುವುದು ಶ್ಲಾಘನೀಯ.

ಹಬ್ಬದಾಚರಣೆಗಳು ಪರಸ್ಪರ ಸಾಮರಸ್ಯ ಮೂಡಿಸುವಂತಿರ ಬೇಕು. ಆ ನಿಟ್ಟಿನಲ್ಲಿ ಈ ಬಾರಿ ೨ ಧರ್ಮದವ ರಿಂದಲೂ ಸೌಹಾರ್ದಯುತ ಹಬ್ಬದಾಚರಣೆಗಳು ನಡೆದಿವೆ. ಇದು ಮುಂದುವರಿಯಬೇಕು. ಇತರ ಧರ್ಮದವರನ್ನು ಸಹೋದರರಂತೆ ಕಾಣುವ ಮನೋಭಾವನೆ ಹೆಚ್ಚಾಗಬೇಕು. ಎಲ್ಲ ಹಬ್ಬದಾಚರಣೆಗಳು ಈ ರೀತಿಯಲ್ಲಿಯೇ ನಡೆಯುವಂತಾಗಬೇಕು. ಕೊಡಗು ಮಾತ್ರವಲ್ಲದೆ ಇತರ ಜಿಲ್ಲೆ, ದೇಶದಲ್ಲಿಯೂ ಇಂತಹ ಆಚರಣೆ ನಡೆಯುವಂತಾಗಬೇಕು.
-ತಮ್ಲಿಖ್ ಧಾರಿಮಿ, ಧಾರ್ಮಿಕ ಮುಖಂಡ, ಕೊಡಗು

ಕೊಡಗು ಜಿಲ್ಲೆಯಲ್ಲಿ ಹಬ್ಬದಾಚರಣೆಗಳು ಅರ್ಥಪೂರ್ಣ ವಾಗಿ ನಡೆದಿವೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತುಕೊಳ್ಳಬೇಕಿದೆ. ಎಲ್ಲ ಜನಾಂಗದವರು ಪ್ರೀತಿ-ವಿಶ್ವಾಸದಿಂದ ಬದುಕುವ ನಿಟ್ಟಿನಲ್ಲಿ ಇಂತಹ ಆಚರಣೆಗಳು ಅವಶ್ಯವಾಗಿವೆ. ಕೊಡಗಿನಲ್ಲಿ ಹೆಚ್ಚಿನ ಶಿಕ್ಷಣ ಪಡೆದಿರುವವರು ಇರುವುದರಿಂದ ಇಂತಹ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಇದು ಎಲ್ಲೆಡೆ ಮುಂದುವರಿಯಬೇಕು.
-ಶ್ರೀ ಸದಾಶಿವ ಸ್ವಾಮೀಜಿ, ಕಿರಿಕೊಡ್ಲಿ ಮಠ, ಸೋಮವಾರಪೇಟೆ.