Mysore
23
broken clouds
Light
Dark

ಇನ್ನೊಂದು ‘ನಾ ನಿನ್ನ ಬಿಡಲಾರೆ’; ಇದು ಹಾರರ್ ಸ್ಪರ್ಶದ ಥ್ರಿಲ್ಲರ್ ಚಿತ್ರ

ಕನ್ನಡದಲ್ಲಿ ಅತೀ ಹೆಚ್ಚು ಬಳಕೆಯಾದ ಶೀರ್ಷಿಕೆಯೆಂದರೆ ಅದು ‘ನಾಗರಹಾವು’. ಇದುವರೆಗೂ ಕನ್ನಡದಲ್ಲಿ ಮೂರು ಥ್ರಿಲ್ಲರ್‍ ಚಿತ್ರಗಳು ಬಿಡುಗಡೆ ಆಗಿವೆ. ಈಗ ಆ ದಾಖಲೆಯನ್ನು ‘ನಾ ನಿನ್ನ ಬಿಡಲಾರೆ’ ಮುರಿದಿದೆ.

1979ರಲ್ಲಿ ಅನಂತ್‍ ನಾಗ್‍ ಮತ್ತು ಲಕ್ಷ್ಮೀ ಅಭಿನಯದ ‘ನಾ ನಿನ್ನ ಬಿಡಲಾರೆ’ ಬಿಡುಗಡೆಯಾಗಿತ್ತು. ಆ ನಂತರ ಕೆಲವು ವರ್ಷಗಳ ಹಿಂದೆ ಅದೇ ಹೆಸರಿನ ಇನ್ನೊಂದು ಚಿತ್ರ ಬಂದಿತ್ತು. ಕೆಲವೇ ತಿಂಗಳುಗಳ ಹಿಂದೆ ‘ನಾ ನಿನ್ನ ಬಿಡಲಾರೆ’’ ಎಂಬ ಚಿತ್ರದ ಮುಹೂರ್ತ ಮಾಡಿದ್ದರು. ಈ ಚಿತ್ರಕ್ಕೆ ‘ಘೋಸ್ಟ್ – 2.0’ ಎಂಬ ಅಡಿಬರಹವೂ ಇತ್ತು. ಆ ಚಿತ್ರದ ಚಿತ್ರೀಕರಣ ಶುರುವಾಗುವ ಮೊದಲೇ ಅದೇ ಹೆಸರಿನ ಇನ್ನೊಂದು ಸದ್ದಿಲ್ಲದೆ ತಯಾರಾಗಿ ಬಿಡುಗಡೆಯಾಗಿದೆ.

ಈ ಹೊಸ ‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್‍ ಇತ್ತೀಚೆಗೆ ಬಿಡುಗಡೆ ಆಗಿದೆ. ಇತ್ತೀಚೆಗೆ ಶರಣ್‍ ಚಿತ್ರದ ಟೀಸರ್‍ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಕಲ್ಬುರ್ಗಿ ಮೂಲದ ಅಂಬಾಲಿ ಭಾರತಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೆ, ಅವರ ತಾಯಿ ಶ್ರೀಮತಿ ಭಾರತಿ ಬಾಳಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ನವೀನ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಹೇಮಂತ್‍ ಹೆಗಡೆ ಅದೇ ಹೆಸರಿನ ಚಿತ್ರ ಮಾಡುತ್ತಿರುವಾಗ ಭಾರತಿಗೆ ಅದೇ ಹೆಸರು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಉತ್ತರಿಸುವ ಅವರು, ‘ನಾವು 2022ರಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ದಾಖಲಿಸಿದ್ದೆವು. ಎರಡು ತಿಂಗಳ ಹಿಂದೆ ಹೇಮಂತ್‍ ಅವರು ಇದೇ ಹೆಸರಿನ ಚಿತ್ರ ಮಾಡುತ್ತಿರುವ ವಿಷಯ ಗೊತ್ತಾಯಿತು. ಯಾರು ಮೊದಲು ಸೆನ್ಸಾರ್‍ ಮಾಡಿಸುತ್ತಾರೋ ಅವರು ಆ ಶೀರ್ಷಿಕೆ ಇಟ್ಟುಕೊಳ್ಳಬಹುದು ಎಂದು ಅವರೇ ಆ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಹೇಳಿದ್ದರು. ನಮ್ಮ ಚಿತ್ರ ಈಗಾಗಲೇ ಸೆನ್ಸಾರ್‍ ಆಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದರು.

‘ನಾ ನಿನ್ನ ಬಿಡಲಾರೆ’ ಕುರಿತು ಮಾತನಾಡುವ ಭಾರತಿ ಅಂಬಾಲಿ, ‘ನಮ್ಮ ನಿರ್ದೇಶಕ ನವೀನ್ ಹಾಗೂ ನಾನು ಐದು ವರ್ಷದ ಗೆಳೆಯರು. ಅವರು ಈ ಕಥೆ ಹೇಳಿದರು. ನಾನು ಈ ತಂಡದ ಜೊತೆ ಸೇರಿ ನಿರ್ಮಾಪಕರನ್ನು ಹುಡುಕಿದೆವು. ಆದರೆ, ಸೆಟ್ ಆಗಲಿಲ್ಲ. ನಂತರ ಅಮ್ಮನಿಗೆ ನಿರ್ದೇಶಕರಿಂದ ಕಥೆ ಹೇಳಿಸಿದೆ. ಅಮ್ಮ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಅಮ್ಮ, ಚಿಕ್ಕಮ್ಮ ಮತ್ತು ಅಜ್ಜಿ ಅವರ ಹೆಸರುಗಳನ್ನು ಇಟ್ಟುಕೊಂಡು ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಾ ನಿನ್ನ ಬಿಡಲಾರೆ’ ಹಾರರ್ ಚಿತ್ರವಾದರೆ, ಇದು ಹಾರರ್ ಅಂಶಗಳುಳ್ಳ ಥ್ರಿಲ್ಲರ್‍ ಚಿತ್ರ ಎಂದರು ನಿರ್ದೇಶಕ ನವೀನ್‍. ‘ನಮ್ಮ ಕಥೆಗೆ ಶೀರ್ಷಿಕೆ ಸೂಕ್ತ ಆಗಿದ್ದರಿಂದ ಈ ಹೆಸರು ಇಡಲಾಗಿದೆ. ಇದೊಂದು ಸಂಪೂರ್ಣ ಹಾರರ್‍ ಚಿತ್ರವಲ್ಲ. ಹಾರರ್‍ ಅಂಶಗಳಿವೆ. ಮಿಕ್ಕಂತೆ ಚಿತ್ರದಲ್ಲಿ ಬೇರೇನೇ ಇದೆ. ಮಾಮೂಲಿ ವಿಷಯಗಳನ್ನು ಬಿಟ್ಟು ಇನ್ನೇನೋ ಹೇಳುವ ಪ್ರಯತ್ನ ಮಾಡಿದ್ದೇವೆ. ಕತ್ಲೆಕಾಡು ಎಂಬ ಊರಿನಲ್ಲಿ ನಡೆಯುವ ಕಥೆ ಇದು. ಇದೊಂದು ಸಸ್ಪೆನ್ಸ್ ಚಿತ್ರ’ ಎಂದರು.

ಈ ಹಿಂದೆ ‘ರಂಗ್‍ಭಿರಂಗಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಪಂಚಾಕ್ಷರಿ ಅಲಿಯಾಸ್‍ ಪಂಚಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರದಲ್ಲಿ ಮಹಾಂತೇಶ್‍, ಸೀರುಂಡೆ ರಘು ಮುಂತಾದವರು ನಟಿಸಿದ್ದಾರೆ.

Tags: