Mysore
23
broken clouds
Light
Dark

ದೇವರು ಒಳ್ಳೆಯವರನ್ನು ಕೈಬಿಡಲ್ಲ; ದರ್ಶನ್‍ ಬಗ್ಗೆ ಮಾಲಾಶ್ರೀ ಮಾತು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದೀಗ ಬಳ್ಳಾರಿ ಸೆಂಟ್ರಲ್‍ ಜೂಲ್‍ ಸೇರಿರುವ ನಟ ದರ್ಶನ್‍ ಅವರ ಪರವಾಗಿ ಕನ್ನಡ ಚಿತ್ರರಂಗದ ಸಾಕಷ್ಟು ನಟ-ನಟಿಯರು ನಿಂತಿದ್ದಾರೆ. ಇದೀಗ ಹಿರಿಯ ನಟಿ ಮಾಲಾಶ್ರೀ ಸಹ ದರ್ಶನ್‍ ಪರ ಮಾತನಾಡಿದ್ದು, ದರ್ಶನ್‍ ಬಹಳ ಒಳ್ಳೆಯವರು ಮತ್ತು ದೇವರು ಒಳ್ಳೆಯವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ, ‘ಮೆಜೆಸ್ಟಿಕ್‍ 2’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನಗೆ ಗೊತ್ತಿರುವ ದರ್ಶನ್‍ ಬೇರೆ. ಅವರೊಬ್ಬ ಜಂಟಲ್‍ಮ್ಯಾನನ್‍. ಅವರಿಗೆ ಬಹಳ ಒಳ್ಳೆಯ ವ್ಯಕ್ತಿತ್ವ ಇದೆ. ನಾನು ಅವರನ್ನು ‘ಕಲಾಸಿಪಾಳ್ಯ’ ಚಿತ್ರದಿಂದ ಬಲ್ಲೆ. ಅದು ನಮ್ಮ ನಿರ್ಮಾಣದ ಚಿತ್ರ. ಅದರಲ್ಲಿ ದರ್ಶನ್ ನಟಿಸಿದ್ದರು. ಆಗ ಅವರು ಹೇಗಿದ್ದರೋ, ‘ಕಾಟೇರ’ ಚಿತ್ರದಲ್ಲೂ ಅದೇ ರೀತಿ ಇದ್ದರು. ಅವರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ’ ಎಂದರು.

‘ಕಾಟೇರ’ ಚಿತ್ರದ ಮೂಲಕ ತಮ್ಮ ಮಗಳು ಆರಾಧನಾಳನ್ನು ಪರಿಚಯಿಸಿದ ಕುರಿತು ಮಾತನಾಡಿದ ಮಾಲಾಶ್ರೀ, ‘ಆ ಚಿತ್ರದಲ್ಲಿ ಆರಾಧನಾಳನ್ನು ಅವರು ಪರಿಚಯಿಸಿದಾಗ ಥ್ಯಾಂಕ್ಸ್ ಹೇಳಿದ್ದೆ. ಅದಕ್ಕವರು, ಆರಾಧನಾ ಜೊತೆಗೆ ನಟಿಸುತ್ತಿರುವುದು ತಮ್ಮ ಅದೃಷ್ಟ ಎಂದು ಹೇಳಿದ್ದರು. ನಮ್ಮ ಜೊತೆಗೆ ಇರುವಾಗ ತುಂಬಾ ಚೆನ್ನಾಗಿ ನಡೆದುಕೊಂಡಿದ್ದಾರೆ, ತುಂಬಾ ಗೌರವ ತೋರಿದ್ದಾರೆ’ ಎಂದರು.

ತಮಗೆ ದೇವರ ಮೇಲೆ ಬಹಳ ನಂಬಿಕೆ ಎಂದು ಈ ಸಂದರ್ಭದಲ್ಲಿ ಹೇಳಿದ ಮಾಲಾಶ್ರೀ, ‘ದೇವರು ಯಾವತ್ತೂ ಒಳ್ಳೆಯವರನ್ನು ಕೈಬಿಡುವುದಿಲ್ಲ. ಈ ಪ್ರಕರಣದ ಬಗ್ಗೆ ನನಗೆ ನಿಜವಾಗಲೂ ಗೊತ್‍ತಿಲ್ಲ. ನನಗೆ ಗೊತ್‍ತಿರುವ ದರ್ಶನ್ ಬೇರೆ. ಅವರ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ದರ್ಶನ್‍ ಮೇಲೆ ಅದೆಷ್ಟು ಅಭಿಮಾನ ಇಟ್ಟಿದ್ದಾರೋ, ನನಗೆ ಮತ್ತು ಆರಾಧನಾಗೆ ಅಷ್ಟೇ ಅಭಿಮಾನವಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.

ರಾಮು ನಿರ್ದೇಶನದ ‘ಮೆಜೆಸ್ಟಿಕ್‍ 2’ ಚಿತ್ರದಲ್ಲಿ ಮಾಲಾಶ್ರೀ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಭರತ್‍ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ನಾಯಕಿಯಾಗಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನು ಮನಸು ಸಂಗೀತ ಮತ್ತು ವೀನಸ್‍ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.