ಶಿವಮೊಗ್ಗ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಷಿಕ್ಯೂಷನ್ ಅನುಮತಿಸಿರುವುದು ಬಿಜೆಪಿ-ಜೆಡಿಎಸ್ ಸೇರಿ ನಡೆಸಿರುವ ಷಡ್ಯಂತ್ರವಾಗಿದೆ ಎಂದು ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಕಿಡಿಕಾರಿದರು.
ಇಲ್ಲಿನ ಲಕ್ಕವಳ್ಳಿ ಭದ್ರಾ ಜಲಾಶಯಕ್ಕೆ ಭಾನುವಾರ (ಆಗಸ್ಟ್ 18) ಅಪಾರ ಬೆಂಬಲಿಗರು ಹಾಗೂ ಸ್ಥಳೀಯರ ರೈತರ ಜೊತೆಯಲ್ಲಿ ಬಾಗಿನ ಅರ್ಪಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ. ತಪ್ಪು ಮಾಡದೇ ಇರುವವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ. ರಾಜ್ಯದ ಆರೂವರೆ ಕೋಟಿ ಕನ್ನಡಿಗರು, ಪಕ್ಷದ ಎಲ್ಲಾ ಸಚಿವ, ಶಾಸಕರ ಬೆಂಬಲ ಸಿಎಂ ಪರವಾಗಿದೆ ಎಂದು ತಿಳಿಸಿದರು.