Mysore
25
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

‘ಆಕಾಶ ಮತ್ತು ಬೆಕ್ಕು’ ಜೊತೆಗೆ ವಾಪಸ್ಸಾದ ಗಿರೀಶ್‍ ಕಾಸರವಳ್ಳಿ

ಕೋವಿಡ್‍ಗೂ ಮುನ್ನ ಜಯಂತ್‍ ಕಾಯ್ಕಿಣಿ ಅವರ ಕಥೆಯನ್ನಾಧರಿಸಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರ ಮಾಡಿದ್ದರು ಪದ್ಮಶ್ರೀ ಪುರಸ್ಕೃತ ಹಿರಿಯ ನಿರ್ದೇಶಕ ಗಿರೀಶ್‍ ಕಾಸರವಳ್ಳಿ. ಆ ನಂತರ ಅವರು ಯಾವೊಂದು ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ಬಹುಶಃ ಅದೇ ತಮ್ಮ ಕೊನೆಯ ಚಿತ್ರವಾಗುವ ಸಾಧ್ಯತೆ ಇದೆ ಎಂಬರ್ಥದಲ್ಲಿ ಮಾತನಾಡಿದ್ದರು. ಹೀಗಿರುವಾಗಲೇ, ಅವರು ಒಂದು ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಅದೇ ‘ಆಕಾಶ ಮತ್ತು ಬೆಕ್ಕು’.

‘ಆಕಾಶ ಮತ್ತು ಬೆಕ್ಕು’, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್‍. ಅನಂತಮೂರ್ತಿ ಅವರ ಕಥೆಯನ್ನಾಧರಿಸಿದ ಚಿತ್ರ. ಈ ಕಥೆಯನ್ನು ಕಾಸರವಳ್ಳಿ ಅವರು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ತೀರ್ಥಹಳ್ಳಿಯ ಒಂದಿಷ್ಟು ಸಮಾನ ಮನಸ್ಕರು ಸೇರಿ ಈ ಚಿತ್ರವನ್ನು ಕ್ರೌಡ್‍ ಫಂಡಿಂಗ್‍ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಅನ್ವೇಷಣೆ ಚಿತ್ರ ಸಂಸ್ಥೆ ಎಂಬ ಚಿತ್ರ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಬಹಳಷ್ಟು ತೀರ್ಥಹಳ್ಳಿಯ ಪ್ರತಿಭೆಗಳು ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಆಡಿಷನ್‍ ಮೂಲಕ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಈ ಚಿತ್ರದ ಕಥೆ ಬರೆದಿರುವವರು, ಕಲಾವಿದರು ಮತ್ತು ತಂತ್ರಜ್ಞರು ಎಲ್ಲರೂ ತೀರ್ಥಹಳ್ಳಿ ತಾಲ್ಲೂಕಿನವರು ಎನ್ನುವುದು ವಿಶೇಷ. ಶಮಿತಾ ಮಲ್ನಾಡ್‍ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕಥೆಯನ್ನು ಚಿತ್ರ ಮಾಡುವ ಮೂಲಕ ನಿರ್ದೇಶಕರಾದವರು ಕಾಸರವಳ್ಳಿ. ಆ ನಂತರ ಬೇರೆ ಸಾಹಿತಿಗಳ ಕಥೆ ಮತ್ತು ಕಾದಂಬರಿಗಳನ್ನಾಧರಿಸಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಬಹಳ ವರ್ಷಗಳ ನಂತರ ಅನಂತಮೂರ್ತಿ ಅವರ ಇನ್ನೊಂದು ಕಥೆಯನ್ನು ಚಿತ್ರ ಮಾಡುತ್ತಿದ್ದಾರೆ.

‘ಆಕಾಶ ಮತ್ತು ಬೆಕ್ಕು’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಏಳರಂದು ಪ್ರಾರಂಭವಾಗಲಿದ್ದು, ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Tags:
error: Content is protected !!