ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಮೇಕೆದಾಟು ಯೋಜನೆಗೆ ಸಹಕರಿಸಿದರೆ ನೀವು ಕೇಂದ್ರ ಮಂತ್ರಿಯಾಗಿದ್ದಕ್ಕೂ ಸಾರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಗೆ ರಾಜ್ಯ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಿಂದ ಕುಮಾರಸ್ವಾಮಿ ಅವರು ಮೇಕೆದಾಟುಗೆ ಚಾಲನೆ ಕೊಡಿಸಿದ್ದೆ ಆದಲ್ಲಿ ಒಬ್ಬ ಕಾಂಗ್ರೆಸ್ಸಿಗನಾಗಿ ನಾನೇ ನಿಮಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ. ನೀವು ಮೇಕೆದಾಟು ಯೋಜನೆಗೆ ಚಾಲನೆ ಕೊಡಿಸಿದರೆ ನೀವು ಕೇಂದ್ರ ಮಂತ್ರಿಯಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇನ್ನು ಡಿಸೆಂಬರ್ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಎಚ್ಡಿಕೆ ಹೇಳಿಕೆಗೆ, ನೀವು ಕೇಂದ್ರದ ಮಂತ್ರಿಯಾಗಿರುವುದು ರಾಜ್ಯ ಸರ್ಕಾರ ಬೀಳಿಸುವುದಕ್ಕಾ? ಈವರೆಗೆ ಮಂತ್ರಿಯಾಗಿ ರಾಜ್ಯಕ್ಕೆ ನಿಮ್ಮ ಕೊಡುಗೆಯೇನು? ರಾಜ್ಯ ಸರ್ಕಾರ ಬೀಳಿಸಲು ಮತ್ತು ಎತ್ತಲು ರಾಜ್ಯದ ಜನರಿದ್ದಾರೆ, ನೀವು ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಸ್ವಲ್ಪ ಹೇಳಿ. ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಬೀಳಿಸುವುದಾ ನೀವು ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಕೊಡುವುದು ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಹೇಗಾದರೂ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿಲು ಕುತಂತ್ರ ಮಾಡುತ್ತಿದೆ. ಕೇಂದ್ರದಿಂದ ಕರ್ನಾಟಕಕ್ಕಾಗಿರುವ ಅನ್ಯಾಯವನ್ನು ಮುಚ್ಚಿಹಾಕಲು ಈ ಎರಡು ಮೈತ್ರಿ ಪಕ್ಷಗಳು ಗಿಮಿಕ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.