Mysore
18
overcast clouds

Social Media

ಶನಿವಾರ, 10 ಜನವರಿ 2026
Light
Dark

ಬೃಂದಾವನಕ್ಕೆ ಹೊಸ ರೂಪ; ಕಾವೇರಿ ಆರತಿ ಪ್ರಾರಂಭ: ಡಿಕೆ ಶಿವಕುಮಾರ್

ಮಂಡ್ಯ:ಮೈಸೂರು ಮಹಾರಾಜರು ಬೃಂದಾವನ ಅಣೆಕಟ್ಟನು ಅದ್ಭುತವಾಗಿ  ನಿರ್ಮಾಣ ಮಾಡಿದ್ದರು. ಗುಂಡೂರಾವ್ ಅವರು ಇದಕ್ಕೆ ಹೊಸರೂಪ ನೀಡಿದರು. ಪ್ರವಾಸೋದ್ಯಮವನ್ನು ಗುರಿಯಾಗಿಟ್ಟುಕೊಂಡು ಪಿಪಿಪಿ ಮಾದರಿಯಲ್ಲಿ ಹೊಸ ರೂಪ ನೀಡಲು ನಮ್ಮ ಸರ್ಕಾರ ಹೊರಟಿದೆ. ಗಂಗಾ ಆರತಿಗಿಂತ ಮಿಗಿಲಾಗಿ ಪ್ರತಿವಾರ ಕಾವೇರಿ ಆರತಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ಬಳಿಕ ಮಾತನಾಡಿದ ಅವರು,  ಕಾವೇರಿ ಆರತಿ ಕಾರ್ಯಕ್ರಮವನ್ನು ಆದಷ್ಟು ಬೇಗ ಪ್ರಾರಂಭ ಮಾಡಲಾಗುವುದು. ಈಗಾಗಲೇ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಾವೇರಿ ಜಲಾನಯದ ಪ್ರದೇಶದ ಶಾಸಕರ ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಸೇರಿಸಿ ಸಮಿತಿ ರಚಿಸಲಾಗಿದೆ ಎಂದರು.

ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಕಳೆದ ವರ್ಷ ಎಲ್ಲಾ ಕಾಲುವೆಗಳನ್ನು ಸ್ವಚ್ಚಗೊಳಿಸಲಾಗಿದೆ. ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂದು 1964-65 ರ ಕಾನೂನಿಗೆ ತಿದ್ದುಪಡಿ ತಂದು ಈ ಬಾರಿಯ ವಿಧಾನಸಭೆಯಲ್ಲಿ ಮಂಡನೆ ಮಾಡಿ ಹೊಸ ಕಾನೂನು ತಂದಿದ್ದೇವೆ ಎಂದು ಹೇಳಿದರು.

ರೈತರ ಬದುಕು ಹಸನಾಗಬೇಕು ಎಂದು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎನ್ನುವ ಕನಸನ್ನು ಸಚಿವ ಚೆಲುವರಾಯಸ್ವಾಮಿ ಅವರು ಹೊಂದಿದ್ದಾರೆ. ಇದು ಮಂಡ್ಯ ಜಿಲ್ಲೆಯ ರೈತರ ಬದುಕಿಗೆ ದೊಡ್ಡ ಮಾರ್ಗದರ್ಶನ ಸಿಗಲಿದೆ. ರೈತನಿಗೆ ಬಡ್ತಿ, ಸಂಬಳ, ನಿವೃತ್ತಿ ಎಂಬುದಿಲ್ಲ. ಆದ ಕಾರಣಕ್ಕೆ ರೈತರನ್ನು ನಾವು ಉಳಿಸಬೇಕಿದೆ ಎಂದರು.

ರೈತರು ಬೃಂದಾವನಕ್ಕೆ ಹೊಸ ರೂಪ ನೀಡುವ ಮೊದಲು ನಮ್ಮ ಜೊತೆ ಚರ್ಚೆ ನಡೆಸಿ ಎಂದು ಹೇಳಿದ್ದಾರೆ. ಯಾವುದೇ ಮುಚ್ಚುಮರೆಯಿಲ್ಲದೇ ಇದರ ಅಭಿವೃದ್ಧಿ ಮಾಡಲಾಗುವುದು ಹಾಗೂ ಅವರ ಜೊತೆ ಚರ್ಚೆ ನಡೆಸಲಾಗುವುದು. ಯಾರ ಜಮೀನು ವಶಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಜಮೀನಿನಲ್ಲೇ ಅಭಿವೃದ್ಧಿ ಮಾಡಲಾಗುವುದು. ಇಷ್ಟವಿದ್ದವರು ಜಮೀನು ನೀಡಬಹುದು, ಯಾರಿಗೂ ಒತ್ತಾಯ ಮಾಡುವುದಿಲ್ಲ. ಅಣೆಕಟ್ಟಿನ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುವುದು. ಸ್ಥಳೀಯ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ನೀರಾವರಿಗೆ ಸಂಬಂಧಿಸಿದಂತೆ ಅನೇಕ ಮನವಿಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಗಳನ್ನು ಶೀಘ್ರ ಪರಿಗಣಿಸಲಾಗುವುದು ಭರವಸೆ ನೀಡಿದರು.

ಪ್ರತಿವರ್ಷ ಐದು ಮಂದಿಗೆ ಪ್ರಶಸ್ತಿ
ಕಬಿನಿ, ಕೆಆರ್ ಎಸ್, ಹೇಮಾವತಿ ವಿಭಾಗದಲ್ಲಿ ಮೂರು ಜನ ರೈತರು ಹಾಗೂ ಒಬ್ಬ ಪ್ರಗತಿಪರ ರೈತ ಮತ್ತು ಕಿರಿಯ ಎಂಜಿನಿಯರ್ ಅವರಿಗೆ ಕಾವೇರಿ ನೀರಾವರಿ ನಿಗಮದಿಂದ ಪ್ರಶಸ್ತಿ ನೀಡಲಾಗುವುದು ಎಂದು ಇದೇ ವೇಳೆ ಹೇಳಿದರು.

Tags:
error: Content is protected !!