Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಎಚ್.ಡಿ ಕೋಟೆ: ಕುಡಿಯುವ ನೀರಿಗಾಗಿ ಪ್ರತಿಭಟನೆ

ಮೈಸೂರು: ಹೆಗ್ಗಡದೇವನ ಕೋಟೆ ತಾಲೂಕಿನ ಡಿ .ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೋಳೂರು ಹಾಡಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಆಗ್ರಹಿಸಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.

ಗೋಳುರು ಹಾಡಿಯಲ್ಲಿ ಬಹುತೇಕ ಆದಿವಾಸಿ ಜನರು ವಾಸಿಸುತ್ತಿದ್ದು, ಅದರಲ್ಲೂ ವಯೋವೃದ್ಧರು ಹಾಗೂ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುಡಿಯುವ ನೀರನ್ನು ಸಹ ಸಮರ್ಪಕವಾಗಿ ನೀಡದೇ ಡಿ.ಬಿ ಕುಪ್ಪೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವಹಿಸಿದೆ.

ಈ ಹಿಂದೆ ಹಲವಾರು ಬಾರಿ ಪ್ರತಿಭಟಿಸಿ ಮನವಿ ಪತ್ರಗಳನ್ನು ಸಲ್ಲಿಸಿದರು ಸಹ ಗ್ರಾಮ ಪಂಚಾಯಿತಿ ಗಮನಹರಿಸಿಲ್ಲ. ಮನವಿ ಪತ್ರಗಳಿಂದ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.

ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಇನ್ನಿತರ ಮೂಲಭೂತ ಸೌಕರ್ಯಗಳಾದ ವಸತಿ, ವಿದ್ಯುತ್ ಸಮಸ್ಯೆಯಿಂದಾಗಿ ಮಳೆಗಾಲದಲ್ಲಿ ಮನೆಗಳ ಸೋರುತ್ತಿದೆ. ಕತ್ತಲೆಯಲ್ಲಿ ಪ್ರಾಣಿಗಳ ದಾಳಿಯ ಭಯದಲ್ಲಿ ಮಕ್ಕಳು ,ಬಾಣಂತಿಯರು, ಗರ್ಭಿಣಿ ಸ್ತ್ರೀಯರು, ವೃದ್ಧರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಇದೆ. ಹಾಗಾಗಿ ಈ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಗೋಳೂರು ಹಾಡಿಯ ಜನರಾದ ಗೌರಮ್ಮ, ಮಣಿ, ಗಂಗೆ, ಸುಶೀಲ, ರಾಣಿ ,ಅಶೋಕ ,ಗೌರಿ ಶಾಂತಿ ಇನ್ನಿತರರು ಆಗ್ರಹಿಸಿದರು.

Tags:
error: Content is protected !!