Mysore
19
overcast clouds
Light
Dark

ಚಾಮುಂಡಿ ಬೆಟ್ಟದಲ್ಲಿ ಕಪಿಚೇಷ್ಟೆ: ಪ್ರವಾಸಿಗರೊಬ್ಬರ ಮೊಬೈಲ್ ಕಸಿದು ಮರವೇರಿದ ಕಪಿರಾಯ

ಮೈಸೂರು: ಕೋತಿಯೊಂದು ಪ್ರವಾಸಿಗರೊಬ್ಬರ ಪರ್ಸ್‌, ಮೊಬೈಲ್‌ ಫೋನ್‌ ಕಿತ್ತುಕೊಂಡು ಅರ್ಧಗಂಟೆಗೂ ಹೆಚ್ಚು ಕಾಲ ಸತಾಯಿಸಿದ ಘಟನೆ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದೆ.

ನಾಡದೇವತೆ ಚಾಮುಂಡಿಯ ದರ್ಶನಕ್ಕೆ ಹಾಸನದಿಂದ ಬಂದಿದ್ದ ಪ್ರವಾಸಿಗರೊಬ್ಬರು ಬೆಟ್ಟದ ತಪ್ಪಲಿನ ಮೂಲಕ ನಾಡದೇವತೆ ದರ್ಶನಕ್ಕೆ ತೆರಳುತ್ತಿದ್ದರು. ಮೆಟ್ಟಿಲು ಮಾರ್ಗದ ಪಾದದ ಬಳಿ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಮಹಿಳೆಯ ಕೈಲಿದ್ದ ಪರ್ಸ್‌ ಕಸಿದ ಕೋತಿ ನೋಡ ನೋಡುತ್ತಿದ್ದಂತೆಯೇ ಮರವೇರಿತು.

ಪರ್ಸ್‌ನಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಬಿಸಾಡಿದ ಕಪಿರಾಯ. ಕೊನೆಗೆ ಮೊಬೈಲ್ ನ್ನು ಕೈಗೆತ್ತಿಕೊಂಡು ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಪ್ರವಾಸಿಗರನ್ನು ಪರದಾಡುವಂತೆ ಮಾಡಿದೆ. ಬಾಳೆಹಣ್ಣು ಆಮಿಷ ನೀಡಿದರೂ ಮೊಬೈಲ್ ಬಿಟ್ಟಿಲ್ಲ. ಸುಮಾರು ಅರ್ಧಗಂಟೆ ಕಾಲ ಚೇಷ್ಠೆ ಮುಂದುವರೆಸಿ ಕೊನೆಗೆ ಮೊಬೈಲ್ ಬಿಸಾಡಿದೆ. ಮೊಬೈಲ್ ಪಡೆದ ನಂತರ ಪ್ರವಾಸಿಗರು ನಾಡದೇವಿ ದರುಶನಕ್ಕೆ ತೆರಳಿದರು.