ಮಂಡ್ಯ: ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆ ಮಂಡ್ಯ ಎಂದು ಹೆಗ್ಗಳಿಕೆ ಪಡೆದಿದೆ. ಆದರೆ ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿಯೇ ದಾಖಲೆಯ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
2024 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿಯೇ 3571 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅಲ್ಲದೇ ಎಸ್ಎಸ್ಎಲ್ಸಿ ಫಲಿತಾಂಶದಲಿ ಕಳೆದ ಬಾರಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದ ಮಂಡ್ಯ ಈ ಬಾರಿ 20ನೇ ಸ್ಥಾನಕ್ಕೆ ಕುಸಿದಿದೆ.
ಈ ಬಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆ-2ರ ಪೂರಕ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿಯೇ 3571 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ತಲೆ ತಗ್ಗಿಸುವ ವಿಷಯವಾಗಿದೆ. ಶಿಕ್ಷಕರು ಪ್ರಾಮಾಣಿಕತೆ, ಆಸಕ್ತಿ, ಪ್ರೀತಿ ಹಾಗೂ ನಿಸ್ವಾರ್ಥ ಮನೋಭಾವವನೆಯಿಂದ ಕಾರ್ಯನಿರ್ವಹಿಸಿ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಬೇಕು ಎಂದರು.
ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಶ್ರೇಷ್ಠವಾಗಿದ್ದು, ಅಂತಹ ಪವಿತ್ರ ವೃತ್ತಿಯಲ್ಲಿರುವ ಶಿಕ್ಷಕರು ಹೆಚ್ಚು ಶ್ರಮಿಸಿದರೆ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯಾಗುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದ ಸಾಧನೆ ಕಡಿಮೆಯಾಗಿದ್ದು, ಪ್ರತಿ ಶಿಕ್ಷಕರು ಆತ್ಮವಲೋಕನ ಮಾಡಿಕೊಂಡು ಇನ್ನು ಮುಂದೆ ಎಚ್ಚೆತ್ತುಕೊಳ್ಳಬೇಕು. ಸರಿಯಾದ ಯೋಜನೆಯನ್ನು ಹಾಕಿಕೊಂಡು ಈ ಬಾರಿ ಆಗಿರುವ ತಪ್ಪುಗಳು ಮರುಪರೀಕ್ಷೆಯಲ್ಲಿ ಮರುಕಳಿಸಬಾರದು ಎಂದು ಸೂಚಿಸಿದರು.