ಹುಬ್ಬಳ್ಳಿ, ಮಾರ್ಚ್ 10: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಬಿಜೆಪಿ ಹೈಕಮಾಂಡ್ ಮೈಸೂರಿನಲ್ಲಿ ಈ ಬಾರಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ರಾಜಮನೆತನದ ಯದುವೀರ್ ಒಡೆಯರ್ ಅವರನ್ನು ಸ್ಪರ್ಧೆ ಮಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ . ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹರವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುತ್ತದೆ ಎಂಬುವುದು ಊಹಾಪೋಹ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ಎರಡು ಬಾರಿ ಗೆದ್ದವರಿಗೂ ಟಿಕೆಟ್ ಕೊಟ್ಟಿದೆ, ಎಂಟು ಸಲ ಗೆದ್ದವರಿಗೂ ಟಿಕೆಟ್ ನೀಡಿದೆ, ಟಿಕೆಟ್ ಘೋಷಣೆ ಬಳಿಕ ವರಿಷ್ಠರು ಸಮಾಧಾನ ಮಾಡುತ್ತಾರೆ, ಉಹಾಪೋಹಗಳಿಗೆ ನಾನು ಉತ್ತರಿಸಲ್ಲ ಎಂದು ಹೇಳಿದರು.
ಹಾವೇರಿ ಲೋಕಸಭಾ ಚುನಾವಣಾ ಕ್ಷೇತ್ರದ ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಬಿಸಿ ಪಾಟೀಲ್ ಅವರ ಬಗ್ಗೆ ಮಾತನಾಡಿದ ಅವರು ಮುಂದಿನ ಎರಡು ಮೂರು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು, ಬಿಎಸ್ ಯಡಿಯೂರಪ್ಪ ಹಾಗೂ ನಾವು ದೆಹಲಿಗೆ ಹೋಗಬೇಕಿತ್ತು. ಆದರೆ ಎಲೆಕ್ಷನ್ ಕಮಿಟಿ ಮೀಟಿಂಗ್ ಮುಂದಕ್ಕೆ ಹೋಗಿದೆ .ಈ ವಿಚಾರವಾಗಿ ನಮ್ಮ ಹೈಕಮಾಂಡ್ ನಾಯಕರು ತೀರ್ಮಾನ ಮಾಡಿದ್ದು ಹಾಗೂ ರಾಷ್ಟ್ರೀಯ ನಾಯಕರು ಟಿಕೆಟ್ ತೀರ್ಮಾನದ ನಂತರ ಮೇಲೆ ಎಲ್ಲರ ಜೊತೆ ಮಾತನಾಡಿ ಸಮಾಧಾನ ಮಾಡುತ್ತಾರೆ ಎಂದರು.