ಮಂಡ್ಯ: ನಾನು ರಾಜಕೀಯಕ್ಕೆ ಬಂದಿದ್ದೇ ಮಂಡ್ಯಕ್ಕಾಗಿ, ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಬಂದರೇ ನನಗೆ ರಾಜಕೀಯವೇ ಬೇಡ ಎಂದು ಮಂಡ್ಯ ಲೋಕಸಭಾ ಕ್ಷೇತ್ರ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧೆ ಮಾಡುದಿಲ್ಲ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಹೊಸ ಜಿಲ್ಲಾಧ್ಯಕ್ಷರು ಬಂದು ಭೇಟಿಯಾಗಿದ್ದರು. ಜಿಲ್ಲೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬ ವಿಷಯವಾಗಿ ಚರ್ಚೆ ಮಾಡಿದ್ದೇವು. ಹಾಲಿ ಸಂಸದರು ಎಂಬ ಸ್ಥಾನ ಮಾನ ಇದ್ದೇ ಇದೆ, ಸಿಟ್ಟಿಂಗ್ ಎಂಪಿಗೆ ಟಿಕೆಟ್ ಕೊಡುವುದು ಎಲ್ಲಾ ಪಕ್ಷಗಳಲ್ಲೂ ವಾಡಿಕೆ. ಫಸ್ಟ್ ಟೈಮ್ ಮಂಡ್ಯದಲ್ಲಿ ಹೆಚ್ಚು ಮತ ಪಕ್ಷಕ್ಕೆ ಬಂದಿದೆ, ಆದ್ದರಿಂದ ಮಂಡ್ಯದಲ್ಲಿ ಬಿಜೆಪಿಯನ್ನು ಉಳಿಸಬೇಕು. ಮಂಡ್ಯದಲ್ಲಿ ಉಳಿಸಿಕೊಂಡರೆ ನಾವು ಗೆದ್ದೆ ಗೆಲ್ತೀವಿ ಎಂದು ಸುಮಲತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡ್ತಿವಿ ಅನ್ನೋ ವಿಚಾರ ಇದುವರೆಗೂ ಎಲ್ಲೂ ಬಂದಿಲ್ಲ. ಮೈತ್ರಿ ಅನ್ನೋದು ಅವರಿಗೆ ಬಿಟ್ಟಿದ್ದು, ನನ್ನ ಪೋಕಸ್ ಏನಿದ್ದರೂ ನನ್ನ ಜಿಲ್ಲೆ ಮಾತ್ರ. ಫಸ್ಟ್ ಟೈಮ್ ಎಂಪಿ ತರ ನನ್ನ ರೆಕಾರ್ಡ್ ಇಲ್ಲ. ನನ್ನ ಬಗ್ಗೆ ಕಪ್ಪು ಚುಕ್ಕಿ ಇಲ್ಲ ಇದೆಲ್ಲ ಬಿಜೆಪಿಗೆ ಗೊತ್ತಿದೆ. ಇಂತ ವಾತಾವರಣದಲ್ಲಿ ಬಿಜೆಪಿ ಮಂಡ್ಯ ಸೀಟ್ ಉಳಿಸಿಕೊಳ್ಳುತ್ತೆ ಅನ್ನೋ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಉತ್ತರಿಸಿದ ಸುಮಲತಾ ಅವರು, ಯಾರು ಯಾರನ್ನ ಬೇಕಾದರೂ ಭೇಟಿ ಅಗಲಿ ಅದು ಬೇರೆ ವಿಚಾರ, ನನ್ನ ಸ್ಪರ್ಧೆ ಬಗ್ಗೆ ಸಾಕಷ್ಟು ಊಹಾಪೋಹಗಳ ಇವೆ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕಾಗಿ, ಮಂಡ್ಯದ ಜನ ಸಾಕಷ್ಟು ಪ್ರೀತಿ ಅಭಿಮಾನ ಸಿಕ್ಕಿದೆ. ಅದನ್ನ ಬಿಟ್ಟು ನಾನು ಬೇರೆ ಕಡೆ ಹೋಗಲ್ಲ. ಅದು ನನಗೆ ಅನಿವಾರ್ಯ ಅಲ್ಲ. ನಾನು ಬೇರೆ ಯಾವ ಕಡೆಗೂ ಹೋಗೋದಿಲ್ಲ. ಅಂಬರೀಶ್ ಹೋದಾಗ ನನಗೂ ಒಂದು ಜವಾಬ್ದಾರಿ ಕೊಟ್ಟು ಹೋಗಿದ್ದಾರೆ ಎಂದು ಸುಮಲತಾ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ನಿಂದ ಟಿಕೆಟ್ ಆಫರ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕಾಂಗ್ರೆಸ್ ಬಳಿ ಟಿಕೆಟ್ ಕೇಳಿಲ್ಲ ಎಂದು ವಿವರಿಸಿದ್ದಾರೆ.