ತಿರುಪತಿ : ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಉದ್ಘಾಟನೆಗೆ ತಿರುಪತಿಯಿಂದ 1 ಲಕ್ಷ ಲಾಡುಗಳನ್ನು ಪೂರೈಸಲಾಗುವುದು ಎಂದು ಟಿಟಿಡಿ ಆಡಳಿತಾಧಿಕಾರಿ ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಆಗಮಿಸುವ ಭಕ್ತಾದಿಗಳಿಗೆ ಹಂಚಲು ಈ ಲಾಡುಗಳನ್ನು ನೀಡಲಾಗುತ್ತಿದ್ದು, ಪ್ರತಿ ಲಾಡು 25 ಗ್ರಾಂ ಇರಲಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿರುಪತಿಗೆ 10 ದಿನದಲ್ಲಿ ₹40 ಕೋಟಿ ಕಾಣಿಕೆ : ವೈಕುಂಠ ಏಕಾದಶಿ ಸಂದರ್ಭದಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ 10 ದಿನಗಳ ಕಾಲ ವೈಕುಂಠದ್ವಾರ ದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ₹40 ಕೋಟಿ ಹಣ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿ ತಿಳಿಸಿದ್ದಾರೆ.
ಟಿಟಿಡಿಯು 36 ಲಕ್ಷ ಲಾಡುಗಳನ್ನು ಮಾರಾಟ ಮಾಡಿದೆ. 2 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ. ದಾಖಲೆಯ ಸಂಖ್ಯೆಯಲ್ಲಿ 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದರು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದಾರೆ.