ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಡಿಸೆಂಬರ್ ಅಂತ್ಯದವರೆಗೂ 3128 ಹಾಗೂ ಜನವರಿ ಕೊನೆಯವರೆಗೂ ದಿನನಿತ್ಯ 1030 ಕ್ಯೂಸೆಕ್ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ.
ಇನ್ನು ತಮಿಳುನಾಡಿನಲ್ಲಿ ಮಳೆಯಾಗುತ್ತಿದ್ದು, ಬೆಳೆಗೆ ಬೇಕಾದ ತೇವಾಂಶವಿದೆ ಹಾಗೂ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗುವ ಪರಿಸ್ಥಿತಿ ಇದೆ ಎಂದು ಕರ್ನಾಟಕ ವಾದ ಮಂಡಿಸಿದರೂ ಸಹ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿನ ಪರವೇ ಸೂಚನೆ ನೀಡಿದೆ.
ಕರ್ನಾಟಕದ ವಾದದಲ್ಲಿ ಏನೇನಿತ್ತು?
* ಡಿಸೆಂಬರ್ 18ರವರೆಗೂ ಕರ್ನಾಟಕದ 4 ಜಲಾಶಯಗಳಿಗೆ ಶೇ. 52.84ರಷ್ಟಿದೆ.
* ತಮಿಳುನಾಡಿದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ನಲ್ಲಿ ಸಮತೋಲನ ಮಳೆಯನ್ನು ಕಾಣಬಹುದಾಗಿದೆ. ಆದ್ದರಿಂದ ಅಲ್ಲಿನ ಬೆಳೆಗಳಿಗೆ ಬೇಕಾದ ತೇವಾಂಶವಿದೆ.
* ತಮಿಳುನಾಡಿನ ಕುರುವಾಯಿ ಬೆಳೆ ಡಿಸೆಂಬರ್ ಮೊದಲ ವಾರದಲ್ಲಿಯೇ ಕಟಾವಾಗಿರುವುದರಿಂದ ಈ ಬೆಳೆಗಳಿಗೆ ನೀರಿನ ಅಗತ್ಯವಿಲ್ಲ.
* ಮಟ್ಟೂರು ಹಾಗೂ ಭವಾನಿ ಸಾಗರ ಜಲಾಶಯಗಳು 50.36 ಟಿಎಂಸಿ ನೀರನ್ನು ಹೊಂದಿದ್ದು, ಇದು ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನದ್ದಾಗಿದೆ.
* ಕರ್ನಾಟಕದ ಜಲಾಶಯಗಳ ಒಳಹರಿವು ಸ್ಥಗಿತಗೊಂಡಿದ್ದು, ಯಾವುದೇ ಒಳಹರಿವಿನ ನಿರೀಕ್ಷೆಯಿಲ್ಲ. ಅಲ್ಲದೇ ಕರ್ನಾಟಕವು ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ, ಕುಡಿಯುವ ನೀರಿಗೆ ಮತ್ತು ಕೈಗಾರಿಕೆಗಳಿಗೆ ಈಗಿರುವ ನೀರಿನ ಸಂಗ್ರಹದಿಂದ ನಿರ್ವಹಿಸಬೇಕಿದೆ.