ನವದೆಹಲಿ : ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ದುಶ್ಕರ್ಮಿಗಳು ಕಲರ್ ಸ್ಮೋಕ್ ಹಾಕಿ ಭದ್ರತಾ ಲೋಪ ಎಸಗಿರುವ ಆಘಾತಕಾರಿ ಘಟನೆಯಿಂದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಸಂಸತ್ ನಲ್ಲಿ ನಡೆಯುವ ಕಲಾಪವನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ನೀಡಲಾಗುತ್ತಿದ್ದ ಪ್ರೇಕ್ಷಕರ ಗ್ಯಾಲರಿ ಪಾಸ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಘಟನೆಯ ಕುರಿತಾಗಿ ಮಾತನಾಡಿರುವ ಅವರು, ಸಂಸದರು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಮನೆಯೊಳಗೆ ಸಾಮಾನ್ಯ ಹೊಗೆ ಕಾಣಿಸಿಕೊಂಡಿದ್ದು, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಸಭಿಕರಿಗೆ ಧೈರ್ಯ ತುಂಬಿದ್ದಾರೆ.
ಘಟನೆಯ ಸಂಪೂರ್ಣ ತನಿಖೆಯನ್ನು ನಡೆಸಲಾಗುತ್ತಿದೆ. ಅಂತೆಯೇ ತನಿಖೆ ಪೂರ್ಣಗೊಂಡ ಬಳಿಕ ನಾನು ಸದನಕ್ಕೆ ತಿಳಿಸುತ್ತೇನೆ. ಈಗಾಗಲೇ ಶಂಕಿತರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.